ರೂಪಾ ಮೌದ್ಗಿಲ್‌ ವಿರುದ್ಧದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ

ಬುಧವಾರ, 15 ಜೂನ್ 2022 (15:08 IST)
ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದದಲ್ಲಿ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್ ದೊಡ್ಡ ರಿಲೀಫ್ ಸಿಕ್ಕಿದ್ದು ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಹೌದು.. ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್ ವಿರುದ್ಧ ನಿವೃತ್ತ ಡಿಜಿ ಸತ್ಯನಾರಾಯಣ ಎಚ್‌ಎನ್ ಸಲ್ಲಿಸಿದ್ದ  ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಮತ್ತು ವಿಶೇಷ ಸವಲತ್ತುಗಳನ್ನು ನೀಡಲು ಶಶಿಕಲಾ ಅವರಿಂದ ಲಂಚ ಪಡೆದುಕೊಂಡಿದ್ದಾರೆಂದು ಆರೋಪ ಮಾಡಿದ್ದ ಮಾಜಿ ಡಿಐಜಿ ರೂಪಾ ಹಾಗೂ ಎರಡು ಮಾಧ್ಯಮ ಸಂಸ್ಥಗಳ ವಿರುದ್ದ ನಿವೃತ್ತ ಡಿಜಿಪಿ ಹೆಚ್.ಎನ್.ಸತ್ಯನಾರಾಯಣ ರಾವ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಕೆಳಹಂತದ ನ್ಯಾಯಾಲಯವು ಅವರ ಅರ್ಜಿಯನ್ನು ಮಾನ್ಯ ಮಾಡಿತ್ತು. ಆದರೆ, ಹೈಕೋರ್ಟ್ ಮಾನ್ಯತೆಯನ್ನು ರದ್ದುಗೊಳಿಸಿದೆ. ಈ ಮೂಲಕ ಇಬ್ಬರು ಪೊಲೀಸ್ ಅಧಿಕಾರಿಗಳ ಜಗಳಕ್ಕೆ ಪೂರ್ಣವಿರಾಮ ಬಿದ್ದಿದೆ.
ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್​ಗೆ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂದು ರೂಪಾ ಮೌದ್ಗಿಲ್ ವರದಿಯಲ್ಲಿ ತಿಳಿಸಿದ್ದರು. ಅಲ್ಲದೆ, ಜೈಲಿನ ಅಕ್ರಮಗಳ ಬಗ್ಗೆ ದೂರು ನೀಡಿದ್ದರು. ಈ ದೂರಿಗೂ ಮೊದಲು ಸರ್ಕಾರದ ಪೂರ್ವಾನುಮತಿ ಪಡೆಯದ ಹಿನ್ನೆಲೆ ನಿವೃತ್ತ IPS ಅಧಿಕಾರಿ ಸತ್ಯನಾರಾಯಣರಾವ್ ಡಿ. ರೂಪಾ ಮೌದ್ಗಿಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಆ ಸಂದರ್ಭದಲ್ಲಿ ಕಾರಾಗೃಹ ಡಿಜಿಪಿ ಐಜಿಯಾಗಿದ್ದ ಹೆಚ್.ಎನ್. ಸತ್ಯನಾರಾಯಣ ರಾವ್ ವಿರುದ್ಧ ಕಾರಾಗೃಹ ಡಿಐಜಿ ಆಗಿದ್ದಾಗ ಡಿ. ರೂಪಾ ಪತ್ರ ಬರೆದಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಪತ್ರದಲ್ಲಿ ಆರೋಪ ಮಾಡಿದ್ದರು. ಜಯಲಲಿತಾ ಆಪ್ತೆ ಶಶಿಕಲಾಗೆ ಅಡುಗೆಮನೆಯ ವಿಶೇಷ ಸವಲತ್ತು ನೀಡಲಾಗಿದೆ. 2 ಕೋಟಿ ಹಣ ಪಡೆದು ವಿಶೇಷ ಸವಲತ್ತು ಕಲ್ಪಿಸಲಾಗಿದೆ ಎಂದು ಅವರು ಪತ್ರದಲ್ಲಿ ಆರೋಪ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ