ನ್ಯಾಯ ಕೊಡಿಸಿ ಎಂದು ಬಂದ ಅಮ್ಮ-ಮಗಳಿಂದ ಲಾಕ್ ಆದ ಯಡಿಯೂರಪ್ಪ

Krishnaveni K

ಶುಕ್ರವಾರ, 15 ಮಾರ್ಚ್ 2024 (12:16 IST)
Photo Courtesy: Twitter
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಾಗಿದೆ. ಈ ಬಗ್ಗೆ ಅವರು ಮಾಧ‍್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಮ್ಮ, ಮಗಳು ನನ್ನ ಬಳಿ ನಮಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಬಂದಿದ್ದರು. ಹಲವಾರು ಬಾರಿ ನನ್ನ ಬಳಿ ಬಂದಿದ್ದರು. ಬಳಿಕ ಏನೇನೋ ನನ್ನ ವಿರುದ್ಧ ಮಾತನಾಡಿದರು. ಅವರನ್ನು ನೇರವಾಗಿ ಕಮಿಷನರ್ ಬಳಿ ಕಳುಹಿಸಿಕೊಟ್ಟೆ. ಈಗ ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

‘ಯಾರೋ ಒಬ್ಬ ಹೆಣ್ಣು ಮಗಳು ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಉಪಕಾರ ಮಾಡಿದರೆ ಈಗ ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಇರಲಿ, ಎದುರಿಸೋಣ’ ಎಂದು ಬಿಎಸ್ ವೈ ಹೇಳಿದ್ದಾರೆ. ಕಳೆದ ತಿಂಗಳು ಘಟನೆ ನಡೆದಿರುವುದಾಗಿ ಬಾಲಕಿ ಮತ್ತು ಆಕೆಯ ತಾಯಿ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ ಪರಮೇಶ್ವರ್ ‘ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ನಿನ್ನೆ ರಾತ್ರಿ ಅವರ ಮೇಲೆ ದೂರು ದಾಖಲಾಗಿದೆ. ಪೊಲೀಸರು ಅವರ ತನಿಖೆ ಮಾಡುತ್ತಿದ್ದಾರೆ’ ಎಂದಿದ್ದಾರೆ. ಆದರೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಎಸ್ ವೈ ಮೇಲೆ ಇಂತಹದ್ದೊಂದು ಆರೋಪ ಬಂದಿರುವುದು ಪಕ್ಷಕ್ಕೆ ಹೊಸ ತಲೆನೋವು ತಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ