ರಾಹುಲ್ ಗಾಂಧಿಯನ್ನು ಬಚ್ಚಾ ಎಂದ ಮೋದಿ ದೇಶದ ಮಕ್ಕಳಿಗೆ ಅವಮಾನ ಮಾಡಿದ್ದಾರೆ: ಬಿಕೆ ಹರಿಪ್ರಸಾದ್

Sampriya

ಬುಧವಾರ, 3 ಜುಲೈ 2024 (19:53 IST)
Photo Courtesy X
ಬೆಂಗಳೂರು:   ರಾಮಮಂದಿರ ನಿರ್ಮಾಣದ ಹೊರತಾಗಿಯೂ ಉತ್ತರಪ್ರದೇಶದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ನಂತರ ಬಿಜೆಪಿ ನಾಯಕರು ಬುದ್ಧಿಭ್ರಮಣೆಗೆ ಒಳಗಾಗಿದ್ದಾರೆ. ಇದಕ್ಕೆಲ್ಲ ಅವರ ಭಾಷಣಗಳೇ ಸಾಕ್ಷಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಆಕ್ರೋಶ ಹೊರಹಾಕಿದರು.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಮೋದಿ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ ಅವರನ್ನೇ ನೇರವಾಗಿ ಪ್ರಶ್ನೆ ಮಾಡಬಹುದಾಗಿತ್ತು. ಆದರೆ ಬಾಲಕ ಬುದ್ಧಿ, ಬಚ್ಚಾ ಎಂಬ ಪದ ಬಳಕೆ ಮಾಡಿದ್ದಾರೆ. ಆಮೂಲಕ ದೇಶದ ಮಕ್ಕಳ ಬಗ್ಗೆ ಅವಹೇಳನ ಮಾಡಿದ್ದಾರೆ. ದೇಶದಲ್ಲಿ ಇವರಿಗಿಂತ ಹಾಗೂ ಇವರ ಮಂತ್ರಿಗಳಿಗಿಂತ ಹೆಚ್ಚು ಬುದ್ಧಿವಂತಿಕೆ ಇರುವ ಮಕ್ಕಳು ಇದ್ದಾರೆ.

ಮೋದಿ ಅವರು ತಮ್ಮ ಭಾಷಣದಲ್ಲಿ ದೇಶಕ್ಕಾಗಿ ಏನು ಮಾಡುತ್ತೇವೆ ಎಂದು ಮಾತನಾಡಲೇ ಇಲ್ಲ. ದೇಶದಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಆಕ್ರಮಣದಿಂದ ವಂಚನೆಗೆ ಒಳಗಾಗಿದ್ದಾರೆ. ಅವರ ಬಗ್ಗೆ ಮಾತಾಡಲಿಲ್ಲ. ಮಣಿಪುರ ಗಲಭೆ ಸಂತ್ರಸ್ತರ ಬಗ್ಗೆ ಮಾತನಾಡಲಿಲ್ಲ. ದೇಶದ ಗಡಿಯನ್ನು ಚೀನಾ ಸೇನೆ ಅತಿಕ್ರಮಣ ಮಾಡಿರುವ ಬಗ್ಗೆ ಮಾತಾಡಲಿಲ್ಲ.

ಮೋದಿ ಅವರು ತಮ್ಮ ಭಾಷಣದಲ್ಲಿ ಕೇವಲ ರಾಹುಲ್ ಗಾಂಧಿ ಅವರನ್ನು ಟೀಕೆ ಮಾಡುವುದರಲ್ಲೇ ನಿರತರಾದರು. ನನ್ನ ರಾಜಕೀಯ ಇತಿಹಾಸದಲ್ಲಿ ಇಷ್ಟು ಕೀಳುಮಟ್ಟದ ಭಾಷಣ ಮಾಡಿದ ಮತ್ತೊಬ್ಬ ಪ್ರಧಾನಿ ಇಲ್ಲ.

ಮೋದಿ ಅವರು ತಮ್ಮ ಭಾಷಣದಲ್ಲಿ  ವಿವೇಕಾನಂದ ಹಾಗೂ ಸಾರ್ವರ್ಕರ್ ಅವರ ಬಗ್ಗೆ ಮಾತನಾಡಿದರು. ವಿವೇಕಾನಂದ ಅವರು ಚಿಕಾಗೋ ಭಾಷಣದಲ್ಲಿ ಪ್ರಪಂಚದ ಶೋಷಿತ, ತುಳಿತಕ್ಕೆ ಒಳಗಾದ ಎಲ್ಲಾ ಜಾತಿ, ಧರ್ಮದವರಿಗೆ ಆಶ್ರಯ ನೀಡಿರುವ ಭಾರತ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದರು. ಹೀಗಾಗಿ ಮೋದಿ ಹಾಗೂ ಬಿಜೆಪಿ ಅವರಿಗೆ ವಿವೇಕಾನಂದರ ಹೆಸರು ಹೇಳುವ ಯೋಗ್ಯತೆ ಇಲ್ಲ. ಇನ್ನು ಸಾರ್ವರ್ಕರ್ ಅವರು ಯಾವುದೇ ಧರ್ಮದ ಮೇಲೆ ನಂಬಿಕೆ ಇಲ್ಲದ ನಾಸ್ತಿಕರು. ಇವರಿಬ್ಬರ ಹೆಸರು ಹೇಳಿ ಮೋದಿ ಅವರು ಭಾಷಣ ಮಾಡಿದ್ದಾರೆ.

ಮೋದಿ ಅವರು ನಮ್ಮ ಪಕ್ಷದ ಅನೇಕ ನಾಯಕರ ಬಗ್ಗೆ ಕೀಳಾಗಿ ಮಾತನಾಡಿ ಪ್ರಧಾನಮಂತ್ರಿ ಹುದ್ದೆಗೆ ಕಳಂಕ ತಂದಿದ್ದಾರೆ. ಮೋದಿ ಅವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ 543 ಸ್ಥಾನಗಳಲ್ಲಿ ಕೇವಲ 99 ಸ್ಥಾನ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಅವರು ಕೂಡ 543 ಸ್ಥಾನಗಳಲ್ಲಿ 242 ಸ್ಥಾನ ಪಡೆದಿದ್ದಾರೆ. ಬೇರೆಯವರ ಹೆಗಲ ಮೇಲೆ ಕೂತು ಸರ್ಕಾರ ಮಾಡಬೇಕಿದೆ.

ಬಿಜೆಪಿಯ ಪಿತೃ ಸಂಸ್ಥೆ ಆರ್ ಎಸ್ ಎಸ್ ನಾಯಕರು ತುರ್ತುಪರಿಸ್ಥಿತಿ ಬೆಂಬಲ ಘೋಷಣೆ ಮಾಡಿದ್ದರು. ಆದರೂ ಬಿಜೆಪಿಯವರು ಆರ್ ಎಸ್ ಎಸ್ ವಿರುದ್ಧವಾಗಿ ಹೋಗುತ್ತಿದ್ದಾರೆ.

ತುರ್ತು ಪರಿಸ್ಥಿತಿಯ ನಂತರ ದೇಶದ ಜನ 1980, 1984, 1991, 2004, 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ