ಚನ್ನಪಟ್ಟಣ ಟಿಕೆಟ್ ಫೈಟ್: ಮಗ ಇಲ್ಲವೇ ಪತ್ನಿಗೇ ಕುಮಾರಸ್ವಾಮಿ ಓಟು

Krishnaveni K

ಶುಕ್ರವಾರ, 18 ಅಕ್ಟೋಬರ್ 2024 (10:44 IST)
ಬೆಂಗಳೂರು: ಚನ್ನಪಟ್ಟಣ ಬೈ ಎಲೆಕ್ಷನ್ ಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಇನ್ನೂ ಒಮ್ಮತ ಮೂಡಿಲ್ಲ. ಇದೀಗ ಕುಮಾರಸ್ವಾಮಿ ಪತ್ನಿ ಅನಿತಾ ಅಥವಾ ನಿಖಿಲ್ ಕುಮಾರಸ್ವಾಮಿಯವರ ಹೆಸರು ಕೇಳಿಬರುತ್ತಿದೆ.

ಬಿಜೆಪಿಯಿಂದ ಸಿಪಿ ಯೋಗೇಶ್ವರ್ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಆದರೆ ಯಾರೇ ಅಭ್ಯರ್ಥಿಯಾದರೂ ಇಲ್ಲಿ ಗೆಲ್ಲಬೇಕಾದರೆ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಇಬ್ಬರ ಬೆಂಬಲವೂ ಬೇಕಾಗುತ್ತದೆ. ಇದರ ನಡುವೆ ನಿಖಿಲ್ ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿ ಹೆಸರು ಬಲವಾಗಿ ಕೇಳಿಬರುತ್ತಿದೆ.

ಚನ್ನಪಟ್ಟಣಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ಸಂಪೂರ್ಣ ಅಧಿಕಾರವನ್ನು ನನಗೆ ನೀಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ತಮ್ಮ ಪುತ್ರನನ್ನು ಇಲ್ಲಿಂದ ಕಣಕ್ಕಿಳಿಸಬೇಕು ಎಂದು ಕುಮಾರಸ್ವಾಮಿಯವರಿಗೆ ಚಿಂತನೆಯಿದೆ. ಇನ್ನೊಂದೆಡೆ ನಿಖಿಲ್ ಇಲ್ಲದೇ ಇದ್ದರೆ ಪತ್ನಿ ಅನಿತಾರನ್ನಾದರೂ ಕಣಕ್ಕಿಳಿಸಬೇಕೆಂಬ ಬಯಕೆ ಅವರದ್ದು.

ಆದರೆ ಸಿಪಿ ಯೋಗೇಶ್ವರ್ ನನಗೇ ಟಿಕೆಟ್ ನೀಡಬೇಕು, ಕುಮಾರಸ್ವಾಮಿ ಕೂಡಾ ನನಗೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಇದರಿಂದ ಚನ್ನಪಟ್ಟಣಕ್ಕೆ ದೋಸ್ತಿ ಪಕ್ಷಗಳ ಅಭ್ಯರ್ಥಿ ಯಾರು ಎಂಬ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ಇತ್ತ ಕಾಂಗ್ರೆಸ್ ನಲ್ಲೂ ಇದೇ ಸಮಸ್ಯೆ. ಹೀಗಾಗಿ ಚನ್ನಪಟ್ಟಣ ಹಾಟ್ ಕಣವಾಗಿ ಮಾರ್ಪಟ್ಟಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ