ಉಪಚುನಾವಣೆಗೆ ಮುನ್ನ ದೇವರ ಮೊರೆ ಹೋದ ಕಾಂಗ್ರೆಸ್ ನಾಯಕರು: ಚಂಡಿಕಾ ಯಾಗಕ್ಕೆ ನಡೆದಿದೆ ಸಿದ್ಧತೆ

Krishnaveni K

ಗುರುವಾರ, 17 ಅಕ್ಟೋಬರ್ 2024 (15:42 IST)
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಡಿಕೆ ಶಿವಕುಮಾರ್ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ರಾಜಕೀಯ ಎದುರಾಳಿ ಎಚ್ ಡಿ ಕುಮಾರಸ್ವಾಮಿಯವರಿಂದ ತೆರವಾಗಿದ್ದ ಸ್ಥಾನವನ್ನು ಕಬಳಿಸಲು ಡಿಕೆಶಿ ಪಣತೊಟ್ಟಿದ್ದಾರೆ.

ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಲು ದೇವರ ಮೊರೆ ಹೋಗಿದ್ದಾರೆ. ನವಂಬರ್ 13 ಕ್ಕೆ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ನಾಯಕರಲ್ಲಿ ಭಾರೀ ತಯಾರಿ ಆರಂಭವಾಗಿದೆ.

ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ ಎಂದು ಡಿಕೆ ಶಿವಕುಮಾರ್ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಕೆಲವು ಮೂಲಗಳ ಪ್ರಕಾರ ಚನ್ನಪಟ್ಟಣದಿಂದ ಡಿಕೆಶಿ ತಮ್ಮ ಸಹೋದರ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಈಗ ಡಿಕೆ ಸುರೇಶ್ ಹೆಸರಿನಲ್ಲಿ ಕೊಲ್ಲೂರು ಮುಕಾಂಬಿಕಾ ಸನ್ನಿಧಿಯಲ್ಲಿ ಚಂಡಿಕಾಯಾಗಕ್ಕೆ ಹೆಸರು ನೋಂದಣಿ ಮಾಡಲಾಗಿದೆ.

ಹೀಗಾಗಿ ಡಿಕೆ ಸುರೇಶ್ ಅವರೇ ಈ ಬಾರಿ ಚನ್ನಪಟ್ಟಣದಲ್ಲಿ ಅಭ್ಯರ್ಥಿಯಾಗಿರಬಹುದು ಎಂಬ ಚರ್ಚೆ ಜೋರಾಗಿದೆ. ಡಿಕೆ ಶಿವಕುಮಾರ್ ಅಂತೂ ಯಾರೇ ನಿಂತರೂ ನಾನೇ ನಿಂತಂತೆ ಎಂದು ಹೇಳುತ್ತಿದ್ದಾರೆ. ಇತ್ತ ಎಚ್ ಡಿ ಕುಮಾರಸ್ವಾಮಿ ಕೂಡಾ ಇದೇ ಮಾತು ಹೇಳುತ್ತಾರೆ. ಈ ಕ್ಷೇತ್ರದ ಉಪಚುನಾವಣೆ ಪಕ್ಷಗಳ ನಡುವಿನ ಕಾದಾಟಕ್ಕಿಂತ ಈ ಇಬ್ಬರು ನಾಯಕರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ