Chinnaswamy Stampede: ಗೋವಿಂದರಾಜ್‌ಗೆ ಗೇಟ್‌ಪಾಸ್‌: ಸರ್ಕಾರಕ್ಕೆ ಜ್ಞಾನೋದಯವಾಯ್ತು ಎಂದ ಎಚ್‌ಡಿಕೆ

Sampriya

ಶನಿವಾರ, 7 ಜೂನ್ 2025 (14:52 IST)
Photo Courtesy X
ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದರಾಜ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೊಕ್‌ ನೀಡಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. 

ರಾಜ್ಯ ಸರ್ಕಾರಕ್ಕೆ ಅಷ್ಟಾದ್ರೂ ಜ್ಞಾನೋದಯವಾಗಿದ್ದಕ್ಕೆ ಅಭಿನಂದನೆಗಳು ಎಂದು ಅವರು ಲೇವಡಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಅಂತ ಐವರನ್ನು ತರಾತುರಿಯಲ್ಲಿ ಅಮಾನತು ಮಾಡಿದ್ದು ಸರಿಯಲ್ಲ. ಅಮಾನತು ಅವಶ್ಯಕತೆ ಇರಲಿಲ್ಲ. ಸರ್ಕಾರ ಈ ರೀತಿ ತೀರ್ಮಾನ ಮಾಡಿದ್ರೆ ಅಧಿಕಾರಿಗಳು ಕೆಲಸ ಮಾಡೋಕೆ ಆಗುವುದಿಲ್ಲ ಎಂದು ಜರಿದಿದ್ದಾರೆ.

ಕಾಲ್ತುಳಿತ ಪ್ರಕರಣದ ಸಂಪೂರ್ಣ ಜವಾಬ್ದಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ತೆಗೆದುಕೊಳ್ಳಬೇಕು. ಇದರಲ್ಲಿ 3 ಜನರದ್ದು ತಪ್ಪಿದೆ. ಏಕಾಏಕಿ 24 ಗಂಟೆ ಒಳಗೆ ಸನ್ಮಾನ ಮಾಡೋದು ಏನಿತ್ತು? ಸನ್ಮಾನವನ್ನು ಸರಿಯಾಗಿ ಮಾಡಿದ್ರಾ? ಆಟಗಾರರನ್ನ ಸರಿಯಾಗಿ ನಡೆಸಿಕೊಂಡ್ರಾ? ಎಂದು ಪ್ರಶ್ನಿಸಿದ್ದಾರೆ.

ನೀವು ಕೊಟ್ಟ ಶಾಲು, ಟೋಪಿ ಎಲ್ಲಾ ಅವರು ತಗೊಂಡು ಹೋದ್ರಾ, ಬಿಸಾಕಿ ಹೋದ್ರಾ ಗೊತ್ತಿಲ್ಲ. ಇದಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಬೇಕಿತ್ತಾ? ಜವಾಬ್ದಾರಿ ತಗೊಂಡೋರು ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು. ಸಿಎಂ, ಡಿಸಿಎಂ, ಗೃಹ ಸಚಿವರು ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ತಪ್ಪುಗಳನ್ನ ಮುಚ್ಚಿಕೊಳ್ಳೋಕೆ ಅಧಿಕಾರಿಗಳ ತಲೆದಂಡ ಮಾಡೋದು ಸರಿಯಲ್ಲ. ಹೀಗೆ ಮಾಡಿದ್ರೆ ಅವರು ಹೇಗೆ ಶ್ರದ್ಧೆಯಿಂದ ಕೆಲಸ ಮಾಡೋಕೆ ಸಾಧ್ಯ? ಸರ್ಕಾರ ಇದನ್ನ ಯೋಚನೆ ಮಾಡಬೇಕಿತ್ತು ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ