Chinnaswamy Stampede: ಕಾಲ್ತುಳಿತಕ್ಕೆ ಮತ್ತಷ್ಟು ವಿಕೆಟ್‌ ಪತನ: ಕೆಎಸ್‌ಸಿಎ ಪದಾಧಿಕಾರಿಗಳು ಗುಡ್‌ಬೈ

Sampriya

ಶನಿವಾರ, 7 ಜೂನ್ 2025 (14:02 IST)
Photo Courtesy X
ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಕೆಟ್‌ಗಳು ಉರುಳುತ್ತಲೇ ಇದೆ. 

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಎ.ಶಂಕರ್‌ ಹಾಗೂ ಖಜಾಂಚಿ ಇ.ಎಸ್‌. ಜೈರಾಮ್‌ ಅವರು ತಮ್ಮ ಹುದ್ದೆಗಳಿಗೆ ಶನಿವಾರ ಗುಡ್‌ಬೈ ಹೇಳಿದ್ದಾರೆ. 

ಅನಿರೀಕ್ಷಿತ ಹಾಗೂ ದುರದೃಷ್ಟಕರ ಘಟನೆಯಲ್ಲಿ ತಮ್ಮ ಪಾತ್ರ ಸೀಮಿತವಾಗಿದ್ದರೂ, ನೈತಿಕ ಹೊಣೆ ಹೊತ್ತು ನಾವು ಕೆಎಸ್‌ಸಿಎ ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇವೆ. ಈ ಕುರಿತು ಸಂಸ್ಥೆಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಲು ಬಯಸುತ್ತೇವೆ ಎಂದು ಉಲ್ಲೇಖಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಜೂನ್‌ 3ರಂದು ನಡೆದ ಫೈನಲ್‌ನಲ್ಲಿ 6 ರನ್‌ ಅಂತರದ ಜಯ ಸಾಧಿಸಿತ್ತು. ಹೀಗಾಗಿ, ದೇಶದಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮರುದಿನ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಸಲು ಉದ್ದೇಶಿಸಿದ್ದ ಆರ್‌ಸಿಬಿ, ಮಧ್ಯಾಹ್ನ 3ಕ್ಕೆ ತಂಡದ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿತ್ತು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಟಗಾರರಿಗೆ ಸನ್ಮಾನ ನಡೆಯುವುದು, ಪರೇಡ್‌ ನಡೆಯುವುದು ಹಾಗೂ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳು ಮೂಡಿದ್ದವು. ಅಭಿಮಾನಿಗಳು ಕ್ರೀಡಾಂಗಣದ ಬಳಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಈ ವೇಳೆ 11 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ