ಬೆಂಗಳೂರು: ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿರುವ ಖುಷಿ ಸುದ್ದಿಯನ್ನು ಹಂಚಿಕೊಂಡ ಸಿಎಂ ಸಿದ್ದರಾಮಯ್ಯರನ್ನು ನೆಟ್ಟಿಗರು ಮೊದಲು ಸಂಬಳ ಸರಿಯಾಗಿ ಹಾಕಿ ಎಂದು ಟ್ರೋಲ್ ಮಾಡಿದ್ದಾರೆ.
ಕರ್ನಾಟಕದ ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸೇರಿದೆ. ಈ ಸಾಧನೆಯ ಶ್ರೇಯ ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗಾಗಿ ನಿತ್ಯ ಸಂಚರಿಸುವ ನಾಡಿನ ನನ್ನ ತಾಯಂದಿರಿಗೆ, ಅಕ್ಕ - ತಂಗಿಯರಿಗೆ ಸಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಖುಷಿ ಹಂಚಿಕೊಂಡಿದ್ದರು.
ಇದಕ್ಕೆ ಕಾಮೆಂಟ್ ಮಾಡಿರುವ ಜನರು ಈಗಲಾದರೂ ಗೊತ್ತಾಯಿತಲ್ಲಾ ಸಾರಿಗೆ ನೌಕರರ ಶ್ರಮ. ನಿಮ್ಮ ಅವಾರ್ಡ್ ಎಲ್ಲಾ ಹಾಗಿರ್ಲಿ, ಮೊದಲು ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ಹಾಕಿ ಎಂದು ಕಾಲೆಳೆದಿದ್ದಾರೆ. ಇತ್ತೀಚೆಗಷ್ಟೇ ಸಾರಿಗೆ ನೌಕರರು ವೇತನ ವಿಚಾರವಾಗಿ ಮುಷ್ಕರ ಹೂಡಿದ್ದರು. ಈ ಹಿನ್ನಲೆಯಲ್ಲಿ ಜನ ಟ್ರೋಲ್ ಮಾಡಿದ್ದಾರೆ.
ಅವಾರ್ಡ್ ಬಂದರೇನು ಸರ್. ನೌಕರರಿಗೆ ಊಟಕ್ಕೆ ಇಲ್ಲದ ಉಪ್ಪಿನಕಾಯಿ ಆಗಿದೆ. ಮೊದಲು ನೌಕರರಿಗೆ 38 ತಿಂಗಳ ಹಿಂಬಾಕಿ ವೇತನ, ನಿಮ್ಮ ಪ್ರಣಾಳಿಕೆಯ 7 ನೇ ವೇತನ ಆಯೋಗದ ಜಾರಿ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಟಾಂಗ್ ಕೊಟ್ಟಿದ್ದಾರೆ.