ದೆಹಲಿ ಫ್ಲೈಟ್ ನಲ್ಲಿ ನಡೆದಿತ್ತಾ ಬಿಜೆಪಿ-ಜೆಡಿಎಸ್ ಒಪ್ಪಂದ? ಸಿಎಂ ಸಿದ್ದರಾಮಯ್ಯ ಬಾಂಬ್

ಸೋಮವಾರ, 30 ಏಪ್ರಿಲ್ 2018 (07:52 IST)
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಬಿಜೆಪಿ ತಂತ್ರ ರೂಪಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದಾರೆ.

ಇದಕ್ಕಾಗಿ ದೆಹಲಿ ವಿಮಾನದಲ್ಲಿ ಅಮಿತ್ ಶಾ ಜತೆಗೆ ಜೆಡಿಎಸ್ ನಾಯಕರು ಗುಪ್ತ ಮಾತುಕತೆ ನಡೆಸಿದ್ದಾರೆ ಎಂದು ಸಿಎಂ ಬಾಂಬ್ ಹಾಕಿದ್ದಾರೆ. ಇದಕ್ಕೆ ಇದೀಗ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೆರಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ‘ಸಿದ್ದರಾಮಯ್ಯಗೆ ಮಾಡಲು ಬೇರೆ ಕೆಲಸವಿಲ್ಲ. ಅಮಿತ್ ಶಾ ಏನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ? ಅವರ ಜತೆ ನಾನೇಕೆ ವಿಮಾನದಲ್ಲಿ ಜತೆಯಾಗಿ ಪ್ರಯಾಣ ಮಾಡಲಿ? ಯಾವ ಆಧಾರದ ಮೇಲೆ ಸಿಎಂ ಇಂತಹ ಆರೋಪ ಮಾಡುತ್ತಾರೆ? ದಾಖಲೆ ಇದ್ದರೆ ತೋರಿಸಲಿ ನೋಡೋಣ’ ಎಂದು ಸವಾಲು ಹಾಕಿದ್ದಾರೆ.

ಅತ್ತ ಬಿಜೆಪಿ ಕೂಡಾ ಈ ಬಗ್ಗೆ ತಿರುಗೇಟು ನೀಡಿದೆ. ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಸಂಸದೆ ಶೋಭಾ ಕರಂದ್ಲಾಜೆ ‘ಹತಾಶೆಯಿಂದ ಸಿಎಂ ಏನೇನೋ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಒಬ್ಬ ಹಿಟ್ ಆಂಡ್ ರನ್ ರಾಜಕಾರಣಿ. ನಾಚಿಕೆಯಾಗಬೇಕು ಅವರಿಗೆ ಇಂತಹ ಆರೋಪ ಮಾಡಲು. ಇಂತಹ ಆರೋಪ ಮಾಡಿದ್ದಕ್ಕೆ ಬೇಷರತ್ ಕ್ಷಮೆ ಯಾಚಿಸಲಿ’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ