ಸಿಎಂ ಸಿದ್ದರಾಮಯ್ಯರದ್ದು ಬರಿ ನಾಟಕ: ಮಾದೇಗೌಡ ಕಿಡಿ

ಗುರುವಾರ, 22 ಸೆಪ್ಟಂಬರ್ 2016 (15:53 IST)
ಕನ್ನಂಬಾಡಿ ಜಲಾಶಯದಲ್ಲಿ ನೀರೇ ಇಲ್ಲ. ನೀರೆಲ್ಲಾ ಖಾಲಿಯಾದ ಮೇಲೆ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರದ್ದು ಬರಿ ನಾಟಕ ಎಂದು ಕಾವೇರಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಆರೋಪಿಸಿದ್ದಾರೆ. 
 
ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಅಸಹಕಾರ ಚಳುವಳಿಯಲ್ಲಿ ಮಾತನಾಡಿದ ಅವರು, ಈಗ ಕಾವೇರಿ ಜಲಾಶಯದಲ್ಲಿ ನೀರು ಖಾಲಿಯಾಗಿದೆ. ಒಂದು ವೇಳೆ ನೀರಿದ್ದರೆ ಅದನ್ನು ಸಹ ತಮಿಳುನಾಡಿಗೆ ಹರಿಸುತ್ತಿದ್ದರು. ಇದ್ದ ನೀರನ್ನೆಲ್ಲ ತಮಿಳುನಾಡಿಗೆ ಬಿಟ್ಟ ಮೇಲೆ, ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಿಲ್ಲ ಎಂದು ದಿಟ್ಟ ನಿರ್ಧಾರ ಕೈಗೊಂಡರೆ ಎನ್ನು ಪ್ರಯೋಜನ ಎಂದು ಕಿಡಿಕಾರಿದರು. 
 
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕವಾಡುತ್ತಿದ್ದಾರೆ. ಕಾವೇರಿ ಜಲಾಶಯದಲ್ಲಿದ್ದ ನೀರೆಲ್ಲ ತಮಿಳುನಾಡಿಗೆ ಹರಿದು ಹೋದ ಮೇಲೆ ವಿಶೇಷ ಅಧಿವೇಶನ ಕರೆದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. 
 
ನೀರು ಕೇವಲ ರೈತರಿಗೆ ಮಾತ್ರ ಅಗತ್ಯವಾಗಿಲ್ಲ. ಪ್ರತಿಯೊಬ್ಬರಿಗೂ ನೀರಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಅಸಹಕಾರ ಚಳುವಳಿಯಲ್ಲಿ ಭಾಗವಹಿಸುವಂತೆ ಕಾವೇರಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ಮನವಿ ಮಾಡಿಕೊಂಡರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ