ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ಹಿಂದೆ ಕಾಂಗ್ರೆಸ್ ಕುತಂತ್ರ: ಅಮಿತ್ ಶಾ

ಬುಧವಾರ, 4 ಏಪ್ರಿಲ್ 2018 (15:21 IST)
ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ಹಿಂದೆ ಕಾಂಗ್ರೆಸ್ ನವರ ಕುತಂತ್ರವಿದೆ. ಇದರ ಹಿಂದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಆಗದಂತೆ ತಡೆಯುವ ಷಡ್ಯಂತ್ರವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಿಡಿಕಾರಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದ ಎದುರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಇದಕ್ಕೆಲ್ಲ ಜಗ್ಗುವುದಿಲ್ಲ. ನಾಲ್ಕೂವರೆ ವರ್ಷ ಸುಮ್ಮನಿದ್ದ ಸಿದ್ದರಾಮಯ್ಯ ಚುನಾವಣೆಗಾಗಿ ಪ್ರತ್ಯೇಕ ಧರ್ಮದ ವಿಷಯ ಹರಿಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 
 
ಇಂದು ಶಿವಯೋಗ ಮಂದಿರದಲ್ಲಿ ಸಾಕಷ್ಟು ಸ್ವಾಮೀಜಿಗಳು ನನ್ನನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಲಿಂಗಾಯತ ಧರ್ಮದ ನಿಲುವಿನ ಬಗ್ಗೆ ಸ್ವಾಮೀಜಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಇದೇ ಮಾದರಿಯ ರೆಕಮಂಡೇಷನ್ ಕೇಂದ್ರ ಕಾಂಗ್ರೆಸ್ ಸರ್ಕಾರ ಹಿಂದೆ ತಿರಸ್ಕರಿಸಿದೆ.
 
ಕಾಂಗ್ರೆಸ್ ನವರು ಚುನಾವಣೆಗಾಗಿ ಲಿಂಗಾಯತ ಸ್ವತಂತ್ರ ಧರ್ಮದ ಕುತಂತ್ರ ಮಾಡುತ್ತಿದ್ದಾರೆ ಎಂದರು.  ಮೀಸಲಾತಿ ರದ್ದಾಗುತ್ತಿದೆ  ಎನ್ನುವ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ. ಬಿಜೆಪಿ ಮೀಸಲಾತಿ ರದ್ದು ಮಾಡಲ್ಲ. ನಾವು ಮೀಸಲಾತಿ ಪರವಾಗಿ ಇದ್ದೇವೆ. ಯಾವುದೇ ಪಕ್ಷ ಮೀಸಲಾತಿ ವಿರೋಧಿಸಿದರು ನಾವು ಖಂಡಿಸುತ್ತೇವೆ. ರಾಜಕೀಯ ಲಾಭಕ್ಕಾಗಿ ಜನರ ದಾರಿ ತಪ್ಪಿಸಲಾಗುತ್ತಿದೆ. ನಾವು ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಬದ್ಧರಾಗಿದ್ದೇವೆ. ದಾರಿ ತಪ್ಪಿಸುವವರ ಮಾತುಗಳನ್ನು ಜನ ಕೇಳಬಾರದು ಎಂದರು.
 
ಇವತ್ತು ನಮ್ಮ ಚುನಾವಣೆ ಅಭಿಯಾನದ ಅತ್ಯುತ್ತಮ ದಿನ. ಕಾಗಿನೆಲೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಮಾಡಿದ್ದೇವೆ. ಕಾಂಗ್ರೆಸ್ ವಿರೋಧದಿಂದ ರಾಜ್ಯಸಭೆಯಲ್ಲಿ ಓಬಿಸಿ ಬಿಲ್ ಪಾಸ್ ಆಗುತ್ತಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಬಂದ್ ಕರೆಯ ಅವಶ್ಯಕತೆಯಿರಲಿಲ್ಲ. ಬಂದ್ ವೇಳೆ ನಡೆದ ಹಿಂಸಾಚಾರಕ್ಕೆ ಪ್ರತಿಪಕ್ಷದ ಎಲ್ಲರೂ ಹೊಣೆಗಾರರು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ