ಬಿಜೆಪಿಯನ್ನು ಮುಗಿಸ್ತೇನೆ ಎಂದಿದ್ದ ಯಡ್ಡಿ, ಇದೀಗ ಅಧಿಕಾರಕ್ಕೆ ತರುವುದು ಗುರಿ ಎನ್ನುತ್ತಿದ್ದಾರೆ: ಉಗ್ರಪ್ಪ ಲೇವಡಿ

ಸೋಮವಾರ, 24 ಅಕ್ಟೋಬರ್ 2016 (15:10 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಎಂಎಲ್‌ಸಿ ಉಗ್ರಪ್ಪ, ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದ ಹಾಗೇ ಆಗ್ತೀದೆ. ಬಿಎಸ್‌ವೈಗೆ ಅರಳು ಮರಳು ಶುರುವಾಗಿದೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
 
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿಎಸ್‌ವೈ, ಕೆಜೆಪಿ ಸ್ಥಾಪನೆ ಬಳಿಕ ಬಿಜೆಪಿ ಮುಗಿಸುವುದೇ ನನ್ನ ಗುರಿ ಎಂದು ಹೇಳಿದ್ದರು. ಆದರೆ, ಇದೀಗ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎನ್ನುತ್ತಿದ್ದಾರೆ ಎಂದರು. 
 
ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದ ಜನತೆಗೆ ಏನು ಬೇಕಾದ್ರೂ ಕೋಡುತ್ತೇವೆ ಎಂದು ನಿನ್ನೆ ನಡೆದ ಸಮಾವೇಶದಲ್ಲಿ ಬಿಎಸ್‌ವೈ ಭರವಸೆ ನೀಡಿದ್ದರು. ಆದರೆ, ಸಮಾವೇಶಕ್ಕೆ ಆಗಮಿಸಿದ್ದ ಜನರಿಗೆ ಊಟವೇ ನೀಡಿಲ್ಲ ಎಂದು ವ್ಯಂಗ್ಯವಾಡಿದರು. 
 
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ. ಈ ಮೂಲಕ ಬಿಜೆಪಿ ಮತ್ತೆ ಆಪರೇಷನ್ ಕಮಲ ಮಾಡಲು ಹೊರಟಿದೆ. ಪ್ರಜಾಪುಭುತ್ವದಲ್ಲಿ ಬಿಜೆಪಿ ನಾಯಕರು ನಂಬಿಕೆ ಕಳೆದುಕೊಂಡಿದ್ದಾರೆ. ಹೀಗಾಗಿ ವಾಮಾಮರ್ಗದ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಎಂಎಲ್‌ಸಿ ಉಗ್ರಪ್ಪ ದೂರಿದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ