ಉಪಚುನಾವಣೆ: ಶ್ರೀನಿವಾಸ್ ಪ್ರಸಾದ್ ಎದುರಾಳಿಯಾಗಿ ಸುನೀಲ್ ಬೋಸ್ ಸಾಧ್ಯತೆ

ಸೋಮವಾರ, 24 ಅಕ್ಟೋಬರ್ 2016 (12:57 IST)
ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ. ಹೀಗಿದ್ದಾಗ ನನ್ನ ಪುತ್ರ ಸುನೀಲ್ ಬೋಸ್ ಚುನಾವಣೆಗೆ ನಿಲ್ಲುವುದರಲ್ಲಿ ತಪ್ಪೇನು ಎಂದು ಲೋಕೋಪಯೋಗಿ ಖಾತೆ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ಪ್ರಶ್ನಿಸಿದ್ದಾರೆ.
 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಯಾರು ಕಣಕ್ಕಿಳಿಯಬೇಕು ಎಂದು ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ನಿರ್ಧರಿಸುತ್ತಾರೆ. ಚುನಾವಣೆಗೆ ಸ್ಪರ್ಧಿಸುವುದರಲ್ಲಿ ನನ್ನ ಪುತ್ರನಿಗೂ ಹಕ್ಕಿದೆ ಎಂದು ಹೇಳಿದರು. 
 
ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನಂಜನಗೂಡು ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದು ಅನಿವಾರ್ಯವಾಗಿದೆ. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪನವರ ಪುತ್ರ ಸುನೀಲ್ ಬೋಸ್ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ.
 
ಸಚಿವ ಸ್ಥಾನ ಕೈತಪ್ಪಿದ್ದರಿಂದ ಬೇಸರಗೊಂಡಿದ್ದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಅಕ್ಟೋಬರ್ 17 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 
 
ನಂಜನಗೂಡು ಉಪಾಚುನಾವಣೆಗೆ ಸಚಿವ ಮಹದೇವಪ್ಪನವರ ಪುತ್ರ ಸುನೀಲ್ ಬೋಸ್ ಕಣಕ್ಕಿಳಿಯುತ್ತಾರೆ ಎಂದು ಸುದ್ದಿ ಹರಡುತ್ತಲೇ, ನನಗಿಂತ ಎಚ್‌.ಸಿ.ಮಹಾದೇವಪ್ಪ ಹಾಗೂ ಆತನ ಪುತ್ರ ಸುನೀಲ್ ಬೋಸ್‌ಗೆ ಉತ್ತಮ ಹೆಸರಿದ್ಯಾ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದ್ದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ