ಕೊರೋನಾ ತಡೆಗೆ ಗಡಿ ಭಾಗಗಳಲ್ಲಿ ಬಿಗಿ ಕ್ರಮ : ಸಚಿವ ಸುಧಾಕರ್

ಮಂಗಳವಾರ, 31 ಆಗಸ್ಟ್ 2021 (13:02 IST)
ಬೆಂಗಳೂರು, ಆ.31 :  ಕೋವಿಡ್ ಹರಡುವಿಕೆ ತಡೆಯುವ ಉದ್ದೇಶದಿಂದ ಗಡಿ ಭಾಗಗಳಲ್ಲಿ ಬಿಗಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಗಡಿ ಭಾಗಗಳಲ್ಲಿ ರಾಜ್ಯಕ್ಕೆ ಆಗಮಿಸುವವರಿಗೆ ಒಂದು ವಾರ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು.

ಅದೇ ರೀತಿ ವಿಮಾನ ನಿಲ್ದಾಣದ ಮೂಲಕ ಬರುವವರನ್ನು ಕೂಡ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಜನಜಂಗುಳಿ ಹೆಚ್ಚಾದರೆ ಕೋವಿಡ್ ಹರಡಲಿದೆ ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಯಾವುದೇ ಸಭೆ-ಸಮಾರಂಭಗಳನ್ನು ಮಾಡಬಾರದು ಎಂದು ಹೇಳುತ್ತದೆ ಎಂದ ಅವರು, ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು. ಕೇರಳದಿಂದ ಬರುವವರು ಕೋವಿಡ್ ಲಸಿಕೆ ಪಡೆದಿದ್ದು, ಆರ್ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೂ ಕೂಡ ಒಂದು ವಾರ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಆನಂತರ ನೆಗೆಟಿವ್ ಬಂದರೆ ಮಾತ್ರ ರಾಜ್ಯದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು.
ವಿಮಾನದಲ್ಲಿ ಬರುವವರನ್ನು ಕೂಡ ಇದೇ ರೀತಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುವುದು. ಅವರು ಅಗತ್ಯವಿದ್ದರೆ ಹೊಟೇಲ್ಗಳಲ್ಲಿ ಉಳಿದುಕೊಳ್ಳಬಹುದು. ಅದರ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ. ಏಳನೆ ದಿನ ಪರೀಕ್ಷೆ ಮಾಡಿ ನೆಗೆಟಿವ್ ವರದಿ ಬಂದರೆ ಮಾತ್ರ ರಾಜ್ಯದಲ್ಲಿ ಪ್ರವೇಶ ಮಾಡಬಹುದಾಗಿದೆ. ನಿನ್ನೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಸದ್ಯಕ್ಕೆ ನಮಗೆ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ ಜಿಲ್ಲೆಗಳು ಸವಾಲಾಗಿವೆ. ಆ ಜಿಲ್ಲೆಗಳಿಗೆ ನಿತ್ಯ ಗಡಿಭಾಗದ ಮೂಲಕ ಬರುವವರನ್ನು ಯಾವ ರೀತಿ ನಿಯಂತ್ರಿಸಬೇಕು ಎಂಬ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಆರನೆ ತರಗತಿಯಿಂದ ಶಾಲೆ ಆರಂಭ ಮಾಡಲು ತೀರ್ಮಾನ ಮಾಡಲಾಗಿದೆ. ವಿದ್ಯಾರ್ಥಿಗಳ ಶಿಕ್ಷಣವೂ ಮುಖ್ಯ. ಶೈಕ್ಷಣಿಕ ಭವಿಷ್ಯದ ಜವಾಬ್ದಾರಿ ಸರ್ಕಾರದ ಮೇಲಿದೆ. ಶಾಲೆ ಪ್ರಾರಂಭ ಮಾಡಿದರೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಸೂಚಿಸಲಾಗಿದೆ. ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಾದರೆ ಶಾಲೆಯನ್ನು ಮುಚ್ಚಲಾಗುವುದು. ವಾರ, ಹತ್ತು ದಿನಗಳ ನಂತರ ಪರೀಕ್ಷೆ ಮಾಡಿ ಮರು ಆರಂಭಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ