ಅಮುಲ್ ನಮ್ದೇ, ನಂದಿನಿನೂ ನಮ್ದೇ: ಧ್ವೇಷ ಯಾಕೆ ಮಾಡ್ತೀರಿ ಎಂದ ಸಿಟಿ ರವಿ

Krishnaveni K

ಬುಧವಾರ, 18 ಜೂನ್ 2025 (14:06 IST)
ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಪರ-ವಿರೋಧ ಚರ್ಚೆಯಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಎಂಎಲ್ ಸಿ ಸಿಟಿ ರವಿ ಅಮುಲ್ ನಮ್ದೇ, ನಂದಿನಿನೂ ನಮ್ದೇ ಧ್ವೇಷ ಯಾಕೆ ಮಾಡಬೇಕು ಎಂದಿದ್ದಾರೆ.

 
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ನ ಅಮುಲ್ ಉತ್ಪನ್ನಗಳ ಮಳಿಗೆಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಕಾಂಗ್ರೆಸ್ ಸೇವ್ ನಂದಿನಿ ಎಂದು ಅಭಿಯಾನ ಮಾಡಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಆಕ್ಷೇಪ ಕೇಳಿಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಟಿ ರವಿ, ಕರ್ನಾಟಕದಲ್ಲಿ ನಂದಿನಿ ಮೊದಲ ಅವಕಾಶ ಕೊಡಬೇಕು. ಒಂದು ವೇಳೆ ನಂದಿನಿಗೆ ಅವಕಾಶ ಕೊಡದೇ ಅಮುಲ್ ಗೆ ಅವಕಾಶ ಕೊಟ್ಟರೆ ತಪ್ಪಾಗುತ್ತದೆ. ಆದರೆ ಸ್ಪರ್ಧೆಯಲ್ಲಿ ನಂದಿನಿಯೂ ಇದ್ದು, ಅಮುಲ್ ಕೂಡಾ ಸ್ಪರ್ಧಿಸಿದ್ದರೆ ತಪ್ಪೇನು?

ನಂದಿನಿ ಈಗ ದೆಹಲಿಯಲ್ಲಿ ತನ್ನ ಮಳಿಗೆ ತೆರೆದಿದೆ. ಉತ್ತರ ಪ್ರದೇಶದಲ್ಲೂ ನಂದಿನಿ ಮಳಿಗೆಯಿದೆ. ಅದು ಅದರ ಸಾಮರ್ಥ್ಯವನ್ನು ತೋರಿಸುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ನಿಲ್ದಾಣಗಳಲ್ಲೂ ಮಳಿಗೆ ತೆರೆಯುವಷ್ಟು ಸಾಮರ್ಥ್ಯವನ್ನು ನಂದಿನಿ ಬೆಳೆಸಿಕೊಳ್ಳಬೇಕು, ಅದಕ್ಕೆ ಶಕ್ತಿ ತುಂಬಿಸುವ ಕೆಲಸ ಸರ್ಕಾರ ಮಾಡಬೇಕು ಎಂದರು.

ನಂದಿನಿ ನಮ್ಮ ರಾಜ್ಯದ್ದು, ಅಮುಲ್ ನಮ್ಮ ರಾಷ್ಟ್ರದ್ದು. ಎರಡೂ ರೈತರ ಸಂಸ್ಥೆಗಳೇ. ಅಲ್ಲಿರುವ ಉತ್ತಮ ಟೆಕ್ನಾಲಜಿಯನ್ನು ನಾವು ಇಲ್ಲಿ ಅಳವಡಿಸಿಕೊಳ್ಳಬೇಕು. ಎರಡನ್ನೂ ಧ್ವೇಷ ಮಾಡುವಂತಹದ್ದು ಏನೂ ಇಲ್ಲ. ಹೀಗಾಗಿ ಸರ್ಕಾರ ಎಲ್ಲೆಲ್ಲಿ ಅಮುಲ್ ಗೆ ಅವಕಾಶ ಮಾಡಿಕೊಟ್ಟಿದೆಯೋ ಅಲ್ಲಿ ನಂದಿನಿಗೂ ಅವಕಾಶ ಮಾಡಿಕೊಡಲಿ ಎಂದು ಸಿಟಿ ರವಿ ಆಗ್ರಹಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ