ಬೆಂಗಳೂರು: ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ಅಡಿಯಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಸಂಬಂಧ ಅಭಿಯಾನದ ಜನಜಾಗೃತಿ ಸಭೆಯನ್ನು ಇಂದು (24ರಂದು) ಸಂಜೆ 4.30ಕ್ಕೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉದ್ಘಾಟಿಸುವರು ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸುವರು. ಇಂಡಿಯನ್ ಎಕ್ಸ್ಪ್ರೆಸ್ನ ವರದಿಗಾರಾಗಿದ್ದ ಹಾಗೂ ತುಘಲಕ್ ಪತ್ರಿಕೆಯ ಸಂಪಾದಕರಾಗಿ ತುರ್ತು ಪರಿಸ್ಥಿತಿ ವಿರುದ್ಧ ನಿರ್ಭೀತಿಯಿಂದ ಜನಜಾಗೃತಿ ಮೂಡಿಸಿದ್ದ ತಮಿಳುನಾಡಿನ ಎಸ್.ಗುರುಮೂರ್ತಿ ಅವರು ಪ್ರಧಾನ ಭಾಷಣ ಮಾಡುವರು ಎಂದು ತಿಳಿಸಿದರು.
ಅದು ಸಂವಿಧಾನ ಉಳಿಸಲು ನಡೆಸಿದ ಹೋರಾಟ. ಸ್ವಾತಂತ್ರ್ಯ ಉಳಿಸಲು, ಪ್ರಜಾಪ್ರಭುತ್ವದ ಮೌಲ್ಯ ಉಳಿಸಲು ನಡೆಸಿದ ಹೋರಾಟ ಅದಾಗಿತ್ತು. ಕಾಂಗ್ರೆಸ್ಸಿನ ಸಂವಿಧಾನವಿರೋಧಿ, ಸರ್ವಾಧಿಕಾರಿ ವರ್ತನೆಯನ್ನು ತಿಳಿಸಲಿದ್ದೇವೆ ಎಂದರು.