ಯುವಕನ ಜತೆ ವಾಸವಿದ್ದ ಬಾಲಕಿ ಸಾವು! ಅಂತದ್ದೇನಾಯ್ತು?

ಭಾನುವಾರ, 12 ಡಿಸೆಂಬರ್ 2021 (10:10 IST)
ವಿಜಯಪುರ : ಯುವಕನ ಜೊತೆಗೆ ವಾಸವಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ನಗರದ ವಿಶ್ವೇಶ್ವರ ನಗರದಲ್ಲಿ ಇಂದು ನಡೆದಿದೆ.

ವಿಶ್ವೇಶ್ವರ ನಗರದಲ್ಲಿರುವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತೆಯ ಶವ ಪತ್ತೆಯಾಗಿದೆ.  ವಿಜಯಪುರ ನಗರದ ಹೊರ ಭಾಗದ ಯೋಗಾಪುರ ಕಾಲೋನಿಯ ಯುವಕ ಸಂಜು ಹುಲ್ಲೂರ ಎಂಬುವವನ ಜೊತೆಗೆ ಅಪ್ರಾಪ್ತ ಬಾಲಕಿ ವಾಸವಿದ್ದಳು ಎಂದು ತಿಳಿದು ಬಂದಿದೆ.

ಮೃತ ಅಪ್ರಾಪ್ತೆ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಯುವಕ ಸಂಜು ಜೊತೆ ಅಪ್ರಾಪ್ತ ಬಾಲಕಿ ಪ್ರೀತಿ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಸಂಜು ಹುಲ್ಲೂರ ಅಪ್ರಾಪ್ತೆಯನ್ನು ದೈಹಿಕವಾಗಿ ಬಳಸಿಕೊಂಡು ಕೊಲೆ ಮಾಡಿದ್ದಾನೆ ಎಂದು ಅಪ್ರಾಪ್ತೆಯ ಕುಟುಂಬದವರು ಆರೋಪಿಸಿದ್ದಾರೆ. ಅಪ್ರಾಪ್ತೆಯನ್ನು ಕೊಲೆಗೈದು ನೇಣು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತೆಯ ಕುಟುಂಬದವರು ಕೊಟ್ಟ ದೂರಿನ ಮೇರೆಗೆ ಆರೋಪಿ ಯುವಕ ಸಂಜು ಹುಲ್ಲೂರನನ್ನು ಪೊಲೀಸರು ಬಂಧಿಸಿದ್ದಾರೆ.  ಅಪ್ರಾಪ್ತೆ ಸಾವನ್ನು ಖಂಡಿಸಿ ಬಂಜಾರಾ ಸಮುದಾಯದವರು ನಗರದ ಗಾಂಧಿಚೌಕ್ ಬಳಿ ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ. ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ