ದರ್ಶನ್ ವಿಚಾರ ಬಿಟ್ಟು ಬಿಡ್ರಪ್ಪಾ ಎಂದು ಕೈ ಮುಗಿದ ಡಿಕೆ ಶಿವಕುಮಾರ್

Krishnaveni K

ಶನಿವಾರ, 7 ಸೆಪ್ಟಂಬರ್ 2024 (14:12 IST)
ಬೆಂಗಳೂರು: ಹತ್ಯೆ ಮಾಡಿ ಬಳ್ಳಾರಿ ಜೈಲಿನಲ್ಲಿ ಕಳೆಯುತ್ತಿರುವ ನಟ ದರ್ಶನ್ ಬಗ್ಗೆ ಕೇಳಿದಾಗ ಡಿಸಿಎಂ ಡಿಕೆ ಶಿವಕುಮಾರ್, ದರ್ಶನ್ ವಿಚಾರ ಬಿಟ್ಟು ಬಿಡ್ರಪ್ಪಾ ಎಂದು ಕೈ ಮುಗಿದಿದ್ದಾರೆ.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಈ ರೀತಿ ಮಾತನಾಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರವೇ ಮುಡಾ ಹಗರಣ ಮುಚ್ಚಿ ಹಾಕಲು ದರ್ಶನ್ ಫೋಟೋ ಹರಿಯಬಿಟ್ಟಿದೆ ಎಂದು ಗಂಭೀರ್ ಆರೋಪ ಮಾಡಿದ್ದರು.

ಇದಕ್ಕೆ ಡಿಕೆಶಿ ಈ ರೀತಿ ವ್ಯಂಗ್ಯವಾಗಿ ಮಾತನಾಡಿದ್ದಾರೆ. ನನಗೆ ಆ ವಿಚಾರವೇ ಗೊತ್ತಿಲ್ಲ. ನಿನ್ನೆಯೆಲ್ಲಾ ನಾನು ಎತ್ತಿನಹೊಳೆ ಯೋಜನೆ ಚಾಲನೆ ವಿಚಾರದಲ್ಲಿ ಬ್ಯುಸಿಯಾಗಿದ್ದೆ. ಕೇಂದ್ರ ಸಚಿವರಿಗೆ ಮಹದಾಯಿ ಸಮಸ್ಯೆ ಇತ್ಯರ್ಥ ಮಾಡಿಕೊಡಲಿ, ಸ್ವಲ್ಪ ಕೇಂದ್ರದಿಂದ ದುಡ್ಡು ಕೊಡಿಸಲಿ ಎಂದು ಇಲ್ಲಿಂದಲೇ ದೀರ್ಘದಂಡ ನಮಸ್ಕಾರ ಹಾಕಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ದರ್ಶನ್ ವಿಚಾರ ಎಲ್ಲಾ ಬಿಟ್ಟು ಬಿಡ್ರಪ್ಪಾ ಮೊದಲು ನಮ್ಮ ಕೆಲಸ ಮಾಡಿಕೊಡಲಿ ಎಂದಿದ್ದಾರೆ. ಈವತ್ತು ಗಣೇಶ ಹಬ್ಬ. ನಮ್ಮ ರಾಜ್ಯಕ್ಕೆ ಮಹದಾಯಿ ಸಮಸ್ಯೆ ಪರಿಹಾರ ಮಾಡಿಕೊಡಲಿ, ಆ ವಿಘ್ನ ವಿನಾಯಕ ಅವರಿಗೆ ಒಳ್ಳೆಯದು ಮಾಡಲಿ ಎಂದು ಡಿಕೆ ಶಿವಕುಮಾರ್ ಕೈ ಮುಗಿದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ