ತೆರಿಗೆ ಹಣವೆಲ್ಲಾ ಉತ್ತರ ಪ್ರದೇಶಕ್ಕಾ, ಹೀಗಾದ್ರೆ ಚೆನ್ನಾಗಿರಲ್ಲ: ಕೇಂದ್ರಕ್ಕೆ ಎಚ್ಚರಿಕೆ ಕೊಟ್ಟ ಡಿಕೆ ಸುರೇಶ್

Krishnaveni K

ಶುಕ್ರವಾರ, 11 ಅಕ್ಟೋಬರ್ 2024 (12:46 IST)
ನವದೆಹಲಿ: ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಮತ್ತೆ ಅನ್ಯಾಯ ಮಾಡಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಆರೋಪಿಸಿದ್ದು, ಮತ್ತೆ ಪ್ರತ್ಯೇಕ ದೇಶದ ಧ್ವನಿಯೆತ್ತಿದ್ದಾರೆ.

ನಮಗೆ ಪದೇ ಪದೇ ಅನ್ಯಾಯ ಮಾಡುತ್ತಿದ್ದರೆ ಬೇರೆ ದಾರಿ ನೋಡಬೇಕಾಗುತ್ತದೆ ಎಂದಿರುವ ಡಿಕೆ ಸುರೇಶ್ ಪರೋಕ್ಷವಾಗಿ ಮತ್ತೊಮ್ಮೆ ಪ್ರತ್ಯೇಕ ರಾಷ್ಟ್ರದ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಡಿಕೆ ಸುರೇಶ್ ಸಂಸದರಾಗಿದ್ದಾಗ ದಕ್ಷಿಣ ಭಾರತದವರಿಗೆ ಅನ್ಯಾಯ ಮಾಡುತ್ತಿದ್ದರೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆಯಿಡಬೇಕಾಗುತ್ತದೆ ಎಂದು ವಿವಾದ ಸೃಷ್ಟಿಸಿದ್ದರು.

ಇದೀಗ ಮತ್ತೊಮ್ಮೆ ಅದೇ ಮಾತನಾಡಿದ್ದಾರೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು. ಆದರೆ ತೆರಿಗೆ ಹಂಚಿಕೆ ವಿಚಾರದಲ್ಲಿ ದಕ್ಷಿಣ ಭಾರತದವರಿಗೆ ಅನ್ಯಾಯ ಮಾಡುತ್ತಿರುವುದು ಯಾಕೆ? ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿಂದ 28,152 ಕೋಟಿ ರೂ ತೆರಿಗೆ ಹಣ ಸಿಕ್ಕಿದೆ. ಆದರೆ ಉತ್ತರಪ್ರದೇಶವೊಂದಕ್ಕೇ 32 ಸಾವಿರ ಕೋಟಿ ರೂ. ನೀಡಲಾಗಿದೆ. ಇದೇ ರೀತಿ ತಾರತಮ್ಯ ಮಾಡುತ್ತಿದ್ದರೆ ನಾವು ಸಹಿಸುತ್ತಾ ಕೂರಲ್ಲ ಎಂದು ಬಂಡಾಯದ ಬಾವುಟ ಹಾರಿಸಿದ್ದಾರೆ.

ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಯಾವುದೇ ಬಿಜೆಪಿ ಸಂಸದರೂ ಧ್ವನಿಯೆತ್ತಲ್ಲ. ನಾನು ಒತ್ತಾಯ ಮಾಡುತ್ತಿದ್ದೇನೆ. ಕೇಂದ್ರ ಈಗಲಾದರೂ ಎಚ್ಚೆತ್ತುಕೊಳ್ಳಿ. ದಕ್ಷಿಣ ಭಾರತಕ್ಕೆ, ಕರ್ನಾಟಕಕ್ಕೆ ಹೆಚ್ಚಿನ ತೆರಿಗೆ ಹಣ ನೀಡಿ ಎಂದು ಡಿಕೆಸು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ