ಬೆಂಗಳೂರು: ಕರ್ನಾಟಕ ಗ್ಯಾರಂಟಿ ಯೋಜನೆಗಳಿಗಾಗಿ ಜನರ ತಲೆಗೆ ಈಗ ಹೊಸ ಹೊರೆಯನ್ನು ಕಟ್ಟಲಾಗಿದೆ. ವಿದ್ಯುತ್ ಬಿಲ್ ಜೊತೆಗೆ ನೌಕರರ ವೆಚ್ಚವನ್ನೂ ಇನ್ನು ಗ್ರಾಹಕರೇ ಹೊರಬೇಕು.
ಇದೆಲ್ಲಾ ಗ್ಯಾರಂಟಿ ಯೋಜನೆಗಳ ಫಲ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ. ಇಲೆಕ್ಟ್ರಿಕ್ ಬಿಲ್ ಜೊತೆಗೆ ಇಂಧನ ಇಲಾಖೆ ಅಥವಾ ಕೆಪಿಟಿಸಿಎಲ್ ನೌಕರರ ಪಿಂಚಣಿ ಹಾಗೂ ಗ್ರಾಚ್ಯುಟಿ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ. ನೌಕರರಿಗೆ ಸರ್ಕಾರ ಹಾಗೂ ಇಂಧನ ಇಲಾಖೆ ನೌಕರರಿಗೆ ನೀಡಬೇಕಾಗಿರುವ ಸೌಕರ್ಯಕ್ಕೆ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಬೆಸ್ಕಾಂ ಬಿಲ್ ನಲ್ಲಿ ಈ ಹೊಸ ಸೇರ್ಪಡೆ ನೋಡಿ ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿದ್ಯುತ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದರ ಮೇಲಿನಿಂದ ಈಗ ನೌಕರರ ವೆಚ್ಚವನ್ನೆಲ್ಲಾ ಗ್ರಾಹಕರ ತಲೆಗೆ ಕಟ್ಟುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತವಾಗಿದೆ.
ಪ್ರತಿ ಯುನಿಟ್ ವಿದ್ಯುತ್ ಮೇಲೆ 36 ಪೈಸೆ ಹೆಚ್ಚಳ ವಸೂಲಿ ಮಾಡಲಾಗುತ್ತಿದೆ. ಇದು ಯಾವ ನ್ಯಾಯ? ಇದು ಹಗಲು ದರೋಡೆ ಅಲ್ಲವೇ? ನೌಕರರ ವೆಚ್ಚವನ್ನು ನಾವು ಯಾಕೆ ಹೊರಬೇಕು? ಸರ್ಕಾರ ಯಾಕಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಇದರ ಬಗ್ಗೆ ಸಾರ್ವಜನಿಕರು ನ್ಯಾಯಾಲಯಕ್ಕೆ ದೂರು ನೀಡಬೇಕು ಎಂದು ಆಗ್ರಹ ಕೇಳಿಬಂದಿದೆ. ಇನ್ನು ಎರಡು ವರ್ಷಗಳ ಕಾಲ ಈ ಹಗಲು ದರೋಡೆ ಮುಂದುವರಿಯಲಿದ್ದು ಇದಕ್ಕೆ ಕೆಪಿಟಿಸಿಎಲ್ ಕೂಡಾ ಅನುಮೋದನೆ ನೀಡಿದೆ.