ಕೆಜೆಪಿ ಪಕ್ಷ ಕಟ್ಟಿ ಯಡಿಯೂರಪ್ಪ ಕೆಟ್ಟಿದ್ದರು ಎಂದ ಈಶ್ವರಪ್ಪ

ಭಾನುವಾರ, 11 ನವೆಂಬರ್ 2018 (15:27 IST)
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿ ಟಿಪ್ಪು ಜಯಂತಿ ಇತ್ಯಾದಿಗಳಲ್ಲಿ ಭಾಗಿಯಾಗಿ ಕೆಟ್ಟಿದ್ದರು. ಈಗ ಬಿಜೆಪಿಗೆ ಬಂದು ಉದ್ಧಾರವಾಗುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಟಿಪ್ಪು ತಂಟೆಗೆ ಹೋದವರೆಲ್ಲಾ ಹಾಳಾಗಿದ್ದಾರೆ. ಟಿಪ್ಪು ಖಡ್ಗ ಖರೀದಿಸಿದ ವಿಜಯ ಮಲ್ಯ ದೇಶ ಬಿಟ್ಟು ಓಡಿ ಹೋದ. ನಂತರ ಟಿಪ್ಪು ಜಯಂತಿ ಮಾಡಿ ಸಿದ್ಧರಾಮಯ್ಯ ಅಧಿಕಾರ ಕಳೆದುಕೊಂಡರು. ಕೆಜೆಪಿಯಲ್ಲಿದ್ದಾಗ ಯಡಿಯೂರಪ್ಪ ಅವರೂ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಕೆಟ್ಟು ಹೋಗಿದ್ದರು. ಅದನ್ನು ನಾನು ಈಗಲೂ ಖಂಡಿಸುತ್ತೇನೆ.
ಯಡಿಯೂರಪ್ಪ ಬಿಜೆಪಿಗೆ ಬಂದ ನಂತರ ಉದ್ಧಾರವಾಗುತ್ತಿದ್ದಾರೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ಟಿಪ್ಪು ಜಯಂತಿಯಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪಲಾಯನ ಮಾಡಿದ್ದಾರೆ. ಜೆಡಿಎಸ್ ಕಛೇರಿಯಲ್ಲಿಯೂ ಈ ಬಾರಿ ಟಿಪ್ಪು ಜಯಂತಿ ಆಚರಿಸಿಲ್ಲ. ಕೆಲವು ಕಾಂಗ್ರೆಸ್ ನಾಯಕರೂ ಈ ಬಾರಿ ಟಿಪ್ಪು ಜಯಂತಿಯಿಂದ ದೂರ ಉಳಿದು ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ಇವರೆಂತಹ ಜಾತ್ಯತೀತವಾದಿಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂರಿಗೆ ಈಗ ಇವರ ಬಗ್ಗೆ ಅರ್ಥವಾಗುತ್ತದೆ. ಟಿಪ್ಪು ಜಯಂತಿಯನ್ನು ಮುಸಲ್ಮಾನರು ಬೇಕಿದ್ದರೆ ಆಚರಿಸಿಕೊಳ್ಳಲಿ. ಆದರೆ ಅದನ್ನು ಸರ್ಕಾರವೇ ಆಚರಿಸುವುದು ಸರಿಯಲ್ಲ. ಸರ್ಕಾರ ಆಚರಿಸಿದರೂ ಹೀಗೆ ಸಿಎಂ ಮತ್ತು ಡಿಸಿಎಂ ಪಲಾಯನ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವಗೆ ಈಗ ಬುದ್ಧಿ ಬಂದಂತಿದೆ. ಜಯಂತಿಯಲ್ಲಿ ಪಾಲ್ಗೊಂಡರೆ ಹಾಳಾಗೋದು ಖಚಿತ ಎಂದು ಅದರಿಂದ ದೂರ ಉಳಿದಿದ್ದಾರೆ ಎಂದರು. 

 



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ