ಹಾವೇರಿ ಜಿಲ್ಲೆಯಲ್ಲಿ ಮೆಘಾ ಡೈರಿ, ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ: ಸಚಿವ ಎಸ್.ಟಿ.ಸೋಮಶೇಖರ್

ಗುರುವಾರ, 21 ಅಕ್ಟೋಬರ್ 2021 (22:04 IST)
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಅವರು ಹಾವೇರಿ ಜಿಲ್ಲೆಯವರೇ ಆದ್ದರಿಂದ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಮೆಘಾ ಡೈರಿ ನೀಡುವ ಕನಸನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ. ಈ ಕುರಿತು ಪ್ರಕ್ರಿಯೆಗಳು ಮುಗಿದಿದೆ. ಆದರೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅದು ಮುಂದಕ್ಕೆ ಹೋಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
 
ಹಾನಗಲ್ ಕ್ಷೇತ್ರದ ಉಪಚುನಾವಣೆ ನಿಮಿತ್ತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ತಾಲೂಕಿನ ಕನ್ನೇಶ್ವರ, ಕುಸನೂರು ಸೇರಿದಂತೆ ನಾನಾ ಗ್ರಾಮಕ್ಕೆ ತೆರಳಿ ಮುಖಂಡರನ್ನು ಭೇಟಿ ಮಾಡಿ ಪಕ್ಷದ ಪರ ಪ್ರಚಾರ ಮಾಡಿದರು.
 
ಈ‌ ವೇಳೆ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳು ಮನಸ್ಸು ಮಾಡದಿದ್ದರೆ ಮಧ್ಯವರ್ತಿ ಬ್ಯಾಂಕ್ ಆಗುತ್ತಿರಲಿಲ್ಲ. ಸಾಲ ಸೌಲಭ್ಯ ಸಿಗುತ್ತಿರಲಿಲ್ಲ. ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಮೆಘಾ ಡೈರಿ ಸ್ಥಾಪನೆ ಮಾಡುವ ಕನಸನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ ಎಂದು ಮುಖಂಡರ ಗಮನಕ್ಕೆ ತಂದರು.
 
ಒಂದೊಂದು ಮತವೂ ಬೊಮ್ಮಾಯಿ‌ ಅವರಿಗೆ ಹೆಚ್ಚು ಶಕ್ತಿ ನೀಡುತ್ತದೆ. ಎಲ್ಲಾ ಕಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಎಲ್ಲರೂ ಕೂಡ ಮತದಾನದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಅವರ ಕೈ ಬಲಪಡಿಸಬೇಕು ಎಂದು ಕರೆಕೊಟ್ಟರು.
 
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರು
 
ಹಾನಗಲ್ ಕ್ಷೇತ್ರದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಉಪ್ಪಣಸಿ ಗ್ರಾಮ ಪಂಚಾಯತ್ ನ ಮುಳಥಳ್ಳಿ ಮತ್ತು ಗುಡ್ಡದ ಮುಳಥಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ