ಅಪ್ಪ ಬಿಜೆಪಿ ಮಗ ಕಾಂಗ್ರೆಸ್ ...!!!

ಮಂಗಳವಾರ, 23 ನವೆಂಬರ್ 2021 (20:39 IST)
ಮಾಜಿ ಶಾಸಕ ಎ. ಮಂಜು ಅವರ ಪುತ್ರ ಡಾ. ಮಂಥರ್ ಗೌಡಗೆ ಕಾಂಗ್ರೆಸ್ ವಿಧಾನಪರಿಷತ್‌ ಕೊಡಗು ಕ್ಷೇತ್ರಕ್ಕೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಎ. ಮಂಜು ಅವರಿಗೆ ನೀಡಲಾಗಿದ್ದ ಪಕ್ಷದ ಎಲ್ಲ ಜವಾಬ್ದಾರಿಗಳನ್ನು ಬಿಜೆಪಿ ವಾಪಸ್ ಪಡೆದುಕೊಂಡಿದೆ.
 
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಈ ಕ್ರಮ ಕೈಗೊಂಡಿದ್ದು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಈ ಕುರಿತಾಗಿ ಅಧಿಕೃತ ಆದೇಶ ಹೊರಡಿಸಿದ್ದಾರೆ.ಹಿಂದೆ ಕಾಂಗ್ರೆಸ್‌ನಲ್ಲಿದ್ದ ಎ. ಮಂಜು ಅವರು ನಂತರದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅವರಿಗೆ ಮಂಡ್ಯ ಜಿಲ್ಲೆಯ ಬಿಜೆಪಿ ಪ್ರಭಾರಿ ಸೇರಿದಂತೆ ಮತ್ತಿತರ ಜವಾಬ್ದಾರಿಗಳನ್ನು ನೀಡಲಾಗಿತ್ತು.
 
ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಅವರ ಪುತ್ರ ಡಾ. ಮಂಥರ್ ಗೌಡ ಅವರಿಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡಲಾಗಿದೆ. ಕೊಡಗು ಕ್ಷೇತ್ರದಿಂದ ಮಂಥರ್ ಗೌಡ ಸ್ಪರ್ಧೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಿಸ್ತು ಸಮಿತಿ ಈ ಕ್ರಮ ಕೈಗೊಂಡಿದೆ.
 
ಇತ್ತೀಚಿನ ಬೆಳವಣಿಗೆಯಿಂದ ಕೆಲವು ಸಂಶಯಗಳು ಉಂಟಾಗಿವೆ. ಈ ಕಾರಣದಿಂದ ಪಕ್ಷದ ಮಂಡ್ಯ ಜಿಲ್ಲೆಯ ಪ್ರಭಾರಿ ಹಾಗೂ ಮತ್ತುಳಿದ ಎಲ್ಲ ಜವಾಬ್ದಾರಿಗಳಿಂದ ಎ. ಮಂಜು ಅವರನ್ನು ಮುಕ್ತಗೊಳಿಸಲಾಗಿದೆ ಎಂದು ಶಿಸ್ತು ಸಮಿತಿ ಆದೇಶದ ಪ್ರತಿಯಲ್ಲಿ ಉಲ್ಲೇಖ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ