ಸಿಗರೇಟು ಸೇದಬೇಡಿ ಎಂದಿದ್ದಕ್ಕೆ ಯುವಕನನ್ನು ಹತ್ಯೆಗೈದ ದುರುಳರು

ಮಂಗಳವಾರ, 3 ಅಕ್ಟೋಬರ್ 2017 (14:45 IST)
ಮನೆಯ ಬಳಿ ಗಲಾಟೆ ಮಾಡುತ್ತಾ ಸಿಗರೇಟು ಸೇದುತ್ತಿರುವುದಕ್ಕೆ ಸಿಗರೇಟು ಸೇದಬೇಡಿ ಎಂದು ಬುದ್ದಿವಾದ ಹೇಳಿದ 32 ವರ್ಷದ ವ್ಯಕ್ತಿಯನ್ನು ನಾಲ್ಕು ಜನ ಯುವಕರ ಗುಂಪೊಂದು ಹತ್ಯೆ ಮಾಡಿ ಪರಾರಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಳಗಿನ ಜಾವ ಎರಡು ಗಂಟೆಗೆ ಅಶೋಕ್‌ನಗರದ ಬಿ ಬಡಾವಣೆಯಲ್ಲಿರುವ ನಿವಾಸದ ಬಳಿ ಕೆಲ ಯುವಕರ ಗುಂಪೊಂದು ಗಲಾಟೆ ಮಾಡುತ್ತಾ ಸಿಗರೇಟು ಸೇದುತ್ತಿರುವುದರಿಂದ ಆಕ್ರೋಶಗೊಂಡ ಹರೀಶ್ ಎಂಬಾತ, ಯುವಕರನ್ನು ತರಾಟೆಗೆ ತೆಗೆದುಕೊಂಡ ಎನ್ನಲಾಗಿದೆ.
 
ಸಿಗರೇಟು ಸೇದಬೇಡಿ ಅದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ಹರೀಶ್ ಹೇಳಿದಾಗ ಯುವಕರ ಗುಂಪು ಅಲ್ಲಿಂದ ತೆರಳಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆದರೆ, ಹರಿತವಾದ ಆಯುಧಗಳೊಂದಿಗೆ ಮರಳಿ ಬಂದ ಯುವಕರ ಗುಂಪು ಮನೆಯ ಮುಂದೆ ನಿಂತಿದ್ದ ಹರೀಶ್ ಮೇಲೆ ಏಕಾಏಕಿ ದಾಳಿ ಮಾಡಿ ಹತ್ಯೆಗೈದು ಪರಾರಿಯಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಪೋಷಕರು ಹರೀಶ್‌ನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾನೆ. ಆರೋಪಿಗಳ ಬಗ್ಗೆ ಕೆಲ ಸುಳಿವುಗಳು ದೊರೆತಿದ್ದು, ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ