ಎಚ್‌ಡಿಕೆಯಿಂದ ಕಾರ್ಯಕರ್ತನಿಗೆ ಕಪಾಳಮೋಕ್ಷ

ಬುಧವಾರ, 10 ಮೇ 2017 (15:11 IST)
ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.
 
ಕುಮಾರಸ್ವಾಮಿ ಸಮ್ಮುಖದಲ್ಲಿ ಟಿಕೆಟ್ ಹಂಚಿಕೆ ಕುರಿತಂತೆ ಗೊಂದಲ ಎದುರಾದಾಗ ಕಾರ್ಯಕರ್ತನೊಬ್ಬ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಜೋರಾಗಿ ಕೂಗಾಡಿದಾಗ ಕೋಪಗೊಂಡ ಕುಮಾರಸ್ವಾಮಿ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾರೆ.
 
ಹುಣಸೂರು ಕ್ಷೇತ್ರದಿಂದ ಹರೀಶ್‌ಗೌಡ ಅವರಿಗೆ ಟಿಕೆಟ್ ನೀಡಬೇಕು. ಹಿರಿಯ ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಜೆಡಿಎಸ್ ಪಕ್ಷಕ್ಕೆ ಬಂದಲ್ಲಿ ಸ್ವಾಗತಿಸುತ್ತೇವೆ. ಅವರನ್ನು ಬೇಕಾದ್ರೆ ಎಂಎಲ್‌ಸಿ ಮಾಡಿ. ಆದ್ರೆ ಟಿಕೆಟ್ ಮಾತ್ರ ಹರೀಶ್ ಗೌಡ ಅವರಿಗೆ ನೀಡಲೇಬೇಕು ಎಂದು ಒತ್ತಾಯಿಸಿ ಕಾಲಿಗೆ ಬಿದ್ದಿದ್ದರಿಂದ ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡುರು ಎಂದು ಮೂಲಗಳು ತಿಳಿಸಿವೆ.
 
ಕಾರ್ಯಕರ್ತರ ಬೂತಮಟ್ಟದ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಕುಮಾರಸ್ವಾಮಿ ಅಲ್ಲಿಂದ ತೆರಳಿದರು ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.

ಕುಮಾರಸ್ವಾಮಿ ಸ್ಪಷ್ಟನೆ

ನಾನು ಕಪಾಳಮೋಕ್ಷ ಮಾಡಿಲ್ಲ. ಕಾಲಿಗೆ ಬಿದ್ದವರನ್ನು ಮೇಲಕ್ಕೆ ಎತ್ತಿ ಬುದ್ದಿವಾದ ಹೇಳಲು ರೂಮ್‌ಗೆ ಕರೆದುಕೊಂಡು ಹೋಗಿ ಸಲಹೆ ನೀಡಿದ್ದೇನೆ. ಟಿಕೆಟ್ ಹಂಚಿಕೆ ಗೊಂದಲದಿಂದ ಇಂತಹ ವಾತಾವರಣ ಸೃಷ್ಟಿಯಾಗಿತ್ತು ನಾನು ಬಿ ಫಾರಂ ನೀಡಲು ಬಂದಿಲ್ಲ ಎಂದು ತಿಳಿಸಿದಾಗ ಪರಿಸ್ಥಿತಿ ತಿಳಿಯಾಯಿತು ಎಂದು ಕುಮಾರ ಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ