ಬಾಂಬೆ ಡೇಸ್ ಪುಸ್ತಕದ ಹೆಸರು ಬದಲಿಸಿದ ಎಚ್. ವಿಶ್ವನಾಥ್

ಸೋಮವಾರ, 27 ಜೂನ್ 2022 (20:45 IST)
ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆ ಆಗಿರುವ ಪಠ್ಯ ಬೇಡ ಹಳೆಯ ಪುಸ್ತಕವನ್ನೇ ಮುಂದುವರಿಸಿ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಅಕ್ಷರದ ವಿಚಾರದಲ್ಲಿ ಸರ್ಕಾರ ಹಠ ಮಾಡಬಾರದು. ಚಕ್ರತೀರ್ಥ ಸಮಿತಿ ಮಾಡಿರುವ ಪರೀಷ್ಕರಣೆಗೆ ನಾಡು ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಜನಾಭಿಪ್ರಾಯಕ್ಕೆ ಸರ್ಕಾರ ಮನ್ನಣೆ ಕೊಡಬೇಕು.ನಾವು ಮಾಡಿದ್ದನ್ನೆ ಮಾಡುತ್ತೇವೆ ಅಂತ ಹಠ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ.  ಪಠ್ಯ ಪುಸ್ತಕದಲ್ಲಿ ಪಕ್ಷದ ವಿಚಾರ ಬರಬಾರದು. ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಮಾತನಾಡಬೇಕು. ಯಾರೋ ಕಂದಾಯ ಮಂತ್ರಿ, ನಗರಾಭಿವೃದ್ಧಿ ಮಂತ್ರಿ ಮಾತನಾಡುತ್ತಾರೆ ಎಂದರೆ ಏನು ಅರ್ಥ ? ಎಂದು ಪ್ರಶ್ನಿಸಿದರು.
 
ಈ ಬಾರಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಗಳನ್ನೇ ಮುಂದುವರೆಸಬೇಕು ಸರ್ಕಾರ ಈ ವಿಚಾರವನ್ನ ಗಂಭೀವಾಗಿ ಪರಿಗಣಿಸಬೇಕು. ಸಾಹಿತಿಗಳು, ಪೋಷಕರು, ತಜ್ಞರು, ಸೇರಿದಂತೆ ಒಂದು ವಿಸ್ತಾರ ಸಮಿತಿ ರಚಿಸಬೇಕು ಸಮಿತಿಯಲ್ಲಿ ಚರ್ಚೆ ಮಾಡಿ ಪಠ್ಯ ಪುಸ್ತಕ ಪರೀಕ್ಷೆರಣೆ ಮಾಡಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲವನ್ನು ಸರಿಪಡಿಸಿಕೊಳ್ಳಬೇಕು ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದರು.
 
ಹಿರಿಯ ಸಾಹಿತಿಗಳು ಒಂದು ಪಕ್ಷದ ವಕ್ತಾರರ ರೀತಿ ಮಾತಾಡುವುದು ಅವರಿಗೆ ಶೋಭೆ ತರಲ್ಲ
 
ಪಠ್ಯ ಪರಿಷ್ಕರಣೆ ಪರ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಬ್ಯಾಟಿಂಗ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಎಸ್.ಎಲ್. ಭೈರಪ್ಪ ಅವರು ದೊಡ್ಡ ಸಾಹಿತಿ. ಆದರೆ ಅವರು ಬಿಜೆಪಿ ವಕ್ತಾರರ ರೀತಿ ಮಾತಾಡುತ್ತಿರುವುದು ಸರಿಯಲ್ಲ. ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ ಬರುತ್ತಿದೆ.  ಹಿರಿಯ ಸಾಹಿತಿಗಳು ಒಂದು ಪಕ್ಷದ ವಕ್ತಾರರ ರೀತಿ ಮಾತಾಡುವುದು ಅವರಿಗೆ ಶೋಭೆ ತರಲ್ಲ ಎಂದರು.
 
ಮಹಾರಾಷ್ಟ್ರದಲ್ಲಿ ಸರ್ಕಾರ ಅಸ್ಥಿರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಕರ್ನಾಟಕದಲ್ಲಿ ಆಗಿದ್ದು ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಸಿಎಂ ಉದ್ಧವ್ ಠಾಕ್ರೆ ನಡವಳಿಕೆಯೆ ಇದಕ್ಕೆ ಕಾರಣ. ಸಿಎಂ ಆದ ಮೇಲೆ ಸರ್ವಾಧಿಕಾರಿಗಳಾದರೆ ಹೀಗೆ ಆಗುತ್ತದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ದರ್ಪ, ದೌರ್ಜನ್ಯದಿಂದ ಇಲ್ಲಿನ ಶಾಸಕರು ದಂಗೆ ಎದ್ದರು. ಇದೇ ಕೆಲಸ ಮಹಾರಾಷ್ಟ್ರದಲ್ಲೂ ಆಗುತ್ತಿದೆ. ಶಾಸಕರ ಸ್ವಾಭಿಮಾನ ಕೆಣಕಿದ್ದಾಗ ಈ ರೀತಿಯ ಕ್ಷೀಪ್ರ ರಾಜಕೀಯ ಕ್ರಾಂತಿ ಆಗುತ್ತೆ ಎಂದು ವಿಶ್ವನಾಥ್ ಹೇಳಿದರು.
 
ಅಗ್ನಿಪಥ ಯೋಜನೆ ಸಮರ್ಥಿಸಿಕೊಂಡ ಹೆಚ್.ವಿಶ್ವನಾಥ್  
 
ಅಗ್ನಿಪಥ್ ಗೆ ವಿಪಕ್ಷಗಳ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿ ಯೋಜನೆ ಸಮರ್ಥಿಸಿಕೊಂಡ ಪರಿಷತ್ ಸದಸ್ಯ ಅಡುಗೂರು ವಿಶ್ವನಾಥ್, ವಿರೋಧ ಪಕ್ಷ ಎಂದಾಕ್ಷಣ ಎಲ್ಲವನ್ನೂ ವಿರೋಧ ಮಾಡುವುದು ಅಲ್ಲ. ವಿಪಕ್ಷಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಎಲ್ಲವಕ್ಕೋ ಆರ್ ಎಸ್ ಎಸ್ ಲಿಂಕ್ ಸರಿಯಲ್ಲ ಎಂದು ಟಾಂಗ್ ನೀಡಿದರು.
 
ತುರ್ತುಪರಿಸ್ಥಿತಿ ಸಮರ್ಥಿಸಿಕೊಂಡ ಎಚ್. ವಿಶ್ವನಾಥ್, ತುರ್ತುಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿ ಯುಗವಾಗಿತ್ತು. ತುರ್ತು ಪರಿಸ್ಥಿತಿಯನ್ನು ದೇವರಾಜ ಅರಸು ರಾಜ್ಯದ ಅಭಿವೃದ್ಧಿಗೆ ಬಳಸಿ ಕೊಂಡರು. ಕೆಟ್ಟ ಕಾನೂನನ್ನು ಒಳ್ಳೆಯ ರೀತಿ ಬಳಸಿಕೊಂಡರು. ತುರ್ತುಪರಿಸ್ಥಿತಿಯಿಂದ ಕರ್ನಾಟಕಕ್ಕೆ ಒಳ್ಳೆಯದಾಯಿತು ಎಂದರು.ಪ್ರಧಾನಿ ಮೋದಿ ಕರ್ನಾಟಕಕ್ಕೆ ಭೇಟಿ ವಿಚಾರ ಕುರಿತು ಮಾತನಾಡಿದ ಅವರು, ಮೋದಿ ಅವರೇ ನಮ್ಮೂರಿಗೆ ಬಂದರೂ ನಮಗೆ ಏನೂ ಬೇಕು ಅಂತಾ ಒಂದು ಮನವಿ ಕೊಡದೆ ಇರೋದು ಬೇಸರ. ಮೋದಿ ಅವರ ಬಳಿ ಕೇಳಲು ಧೈರ್ಯ ಯಾಕೆ ಬೇಕು.‌ ಅವರೇನೂ ಸಿಂಹವೇ? ಎಂದು ಪ್ರಶ್ನಿಸಿದರು.
 
ಮೋದ ಬಳಿ ಕೇಳಲು ಧೈರ್ಯ ವಿಲ್ಲ ಎಂಬ ಕಾಂಗ್ರೇಸಿಗರ ಹೇಳಿಕೆ ವಿಚಾರ ಇಂದಿರಾಗಾಂಧಿ ಬಳಿ ಕೇಳಲೂ ಕಾಂಗ್ರೆಸ್ ಗೆ ಧೈರ್ಯವಿತ್ತಾ? ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.
 
ಬಾಂಬೆ ಡೇಸ್ ಪುಸ್ತಕದ ಹೆಸರು ಬದಲಿಸಿದ ಎಚ್. ವಿಶ್ವನಾಥ್, ಅದು ಬಾಂಬೆ ಡೇಸ್ ಅಲ್ಲ. ಬದಲಾಗಿ ಕಾಶ್ಮೀರ್ ಫೈಲ್ಸ್ ಥರ ಬಾಂಬೆ ಫೈಲ್ಸ್ ಅಂತಾ ಬದಲಾಯಿಸಿದ್ದೇನೆ. ಈ ವರ್ಷದ ಒಳಗೆ ಪುಸ್ತಕ ಬಿಡುಗಡೆ ಆಗುತ್ತೆ. ಅದು ಬಾಂಬ್ ಅಲ್ಲ. ವಾಸ್ತವ ಸತ್ಯ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ