ಗಣರಾಜ್ಯೋತ್ಸವ ಮುನ್ನಾದಿನ ಸೇನಾ ಕ್ಯಾಂಪ್ ಮೇಲೆ ಬಿದ್ದ ಭಾರಿ ಹಿಮಪಾತ, ಮೃತ ಯೋಧರಲ್ಲಿ ಹಾಸನ ಜಿಲ್ಲೆಯ ಸಂದೀಪ್ ಒಬ್ಬರು, ಶಾಂತಿಗ್ರಾಮ ಹೋಬಳಿ ದೇವಿಹಳ್ಳಿ ವೀರಯೋಧ ಸಂದೀಪ್ ಶೆಟ್ಟಿ(24).
ಕುಟುಂಬದಲ್ಲಿ ಒಬ್ಬನೇ ಮಗನಾಗಿದ್ದ ಸಂದೀಪ್, ಮುಂದಿನ ತಿಂಗಳು 22 ರಂದು ಮದುವೆ ನಿಶ್ಚಯವಾಗಿತ್ತು, ಜಮ್ಮು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ ಬಳಿಯ ಸೇನಾ ಕ್ಯಾಂಪ್ ಮೇಲೆ ಹಿಮಪಾತವಾಗಿತ್ತು.
ಪಾರ್ಥೀವ ಶರೀರ ತವರಿಗೆ ತರಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೇಂದ್ರದ ರಕ್ಷಣಾ ಸಚಿವರೊಂದಿಗೆ ದೂರವಾಣಿ ಯಲ್ಲಿ ಮಾತನಾಡಿ ಮೃತ ಯೋಧನ ದೇಹವನ್ನು ತುರ್ತಾಗಿ ಕಳುಹಿಸಿಕೊಡುವಂತೆ ಹಾಗೂ ಅವರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿರುವ ತಮ್ಮ ಆಪ್ತ ಸಹಾಯಕರಿಗೆ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳ ಸಂಪರ್ಕದಲ್ಲಿ ತಮಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಕಂಬನಿ ಮಿಡಿದ ಸಚಿವರು: ಜಮ್ಮು ಕಾಶ್ಮೀರದ ಗುರೇಜ್ ನಲ್ಲಿ ನಡೆದ ಹಿಮಪಾತದಲ್ಲಿ ವೀರ ಮರಣವನ್ನಪ್ಪಿರುವ ಹಾಸನ ಜಿಲ್ಲೆಯ ಶಾಂತಿ ಗ್ರಾಮ ಹೋಬಳಿ ದೇವಿಹಳ್ಳಿ ಗ್ರಾಮದ ಸಂದೀಪ್ ಕುಮಾರ್ ಅವರ ನಿಧನಕ್ಕೆ ಜಿಲ್ಲಾ ಉಸ್ತವಾರಿ, ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವರಾದ ಎ. ಮಂಜು ಅವರು ಕಂಬನಿ ಮಿಡಿದಿದ್ದಾರೆ. ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಇದೊಂದು ಅತ್ಯಂತ ದುಃಖದ ಸಂಗತಿ ದೇಶದ ಜನರ ಜೀವ ರಕ್ಷಣೆಗಾಗಿ ಭಾರತೀಯ ಸೇನೆಯಲ್ಲಿ ಹಗಲಿರುಳು ದುಡಿದು , ಪ್ರಕೃತಿ ಆಕಸ್ಮಿಕದಲ್ಲಿ ಹುತಾತ್ಮರಾದ ಸಂದೀಪ್ ಕುಮಾರ್ ಆತ್ಮಕ್ಕೆ ಚಿರ ಶಾಂತಿ ಸಿಗಲಿ ,ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ .