ನಿಮ್ಮ ಮಗನ ಸಾವಿಗೆ ನೀವೇ ಕಾರಣ ಎಂದರೆ ಹೇಗಾಗಬೇಡ: ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ

Krishnaveni K

ಶನಿವಾರ, 25 ಮೇ 2024 (13:35 IST)
ಬೆಂಗಳೂರು: ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಓಡಿ ಹೋಗಲು ಎಚ್ ಡಿ ದೇವೇಗೌಡರು ಕಾರಣ ಎಂದಿದ್ದ ಸಿಎಂ ಸಿದ್ದರಾಮಯ್ಯಗೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಪುತ್ರನ ಸಾವಿನ ವಿಚಾರವನ್ನು ಕೆದಕಿದ್ದಾರೆ.

‘ಇವರ ಮಗ ವಿದೇಶಕ್ಕೆ ಹೋದಾಗ ದುರ್ಘಟನೆ ನಡೆಯಿತು ಅಲ್ವಾ? ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ವಿದೇಶಕ್ಕೆ ಹೋಗಿದ್ದು ಯಾಕೆ? ಯಾವ ಅಮಲಿನ ಪಾರ್ಟಿಯಲ್ಲಿದ್ದರು? ಅದರ ಬಗ್ಗೆ ಯಾಕೆ ತನಿಖೆ ಮಾಡಲಿಲ್ಲ. ಅವರ ಜೊತೆ ಎಷ್ಟು ಜನ ಹೋಗಿದ್ದರು. ನಿಮ್ಮ ಮಗನ ಸಾವಿಗೆ ನೀವೇ ಕಾರಣ ಎಂದರೆ ನಿಮ್ಮ ಮನಸ್ಸಿಗೆ ಹೇಗಾಗಬೇಡ? ಬೆಳೆದ ಮಕ್ಕಳು ಎಲ್ಲವನ್ನೂ ತಂದೆ, ತಾಯಿಗೆ ಕೇಳಿಯೇ ಮಾಡುತ್ತಾರಾ?’ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

‘ದೇವೇಗೌಡರ ಬಗ್ಗೆ ನೀವು ಕೇಳಿದ್ದು ಹಾಗೆಯೇ ಇದೆ. ಶೋಕದ ಮನೆಯಲ್ಲಿ ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ. ದಯಮಾಡಿ ಅರ್ಥ ಮಾಡಿಕೊಳ್ಳಿ. ರಾಜತಾಂತ್ರಿಕ ಪಾಸ್ ಪೋರ್ಟ್ ಬಗ್ಗೆ ಗೊತ್ತಾ ನಿಮಗೆ? ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೂಲಕ ಪತ್ರ ಬರೆದು ವಾಪಸ್ ಕರೆಸುವ ಕೆಲಸ ಮಾಡುತ್ತಿದ್ದೇವೆ. ದೇವೇಗೌಡರ ಜೊತೆಗೇ ಕೆಲಸ ಮಾಡಿರುವವರಿಗೆ ಅವರು ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಾರೆ ಗೊತ್ತಿಲ್ವಾ? ಗೊತ್ತಿದ್ದೂ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಯಾಕೆ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ,  ನನ್ನ ಮಗ ಸತ್ತು 8 ವರ್ಷಗಳಾಗಿವೆ. ಕುಮಾರಸ್ವಾಮಿ ಅಣ್ಣನ ಮಗ ರೇಪ್ ಮಾಡಿ ಓಡಿ ಹೋಗಿದ್ದಾನೆ. ರಾಕೇಶ್ ಸಾವಿಗೂ ಈ ಪ್ರಕರಣಕ್ಕೂ ಏನು ಸಂಬಂಧ  ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ