ಬೆಂಗಳೂರು: ಬಿಜೆಪಿಯಿಂದ ಉಚ್ಚಾಟನೆಗೊಂಡ ನಂತರ ಮತ್ತಷ್ಟು ರಗಡ್ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೇ ಯಡಿಯೂರಪ್ಪ ಕುಟುಂಬದ ವಿರುದ್ಧ ಧ್ವನಿ ಎತ್ತಿದ್ದಾರೆ.
ಕರ್ನಾಟಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು.
ANI ಜೊತೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, "ರಾಜ್ಯದಲ್ಲಿ ಪಕ್ಷವನ್ನು ತಮ್ಮ ಕುಟುಂಬದ ಪಕ್ಷವನ್ನಾಗಿ ಮಾಡಿಕೊಂಡ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ನಾನು ಧ್ವನಿ ಎತ್ತುತ್ತೇನೆ. ಪ್ರಧಾನಿ ಮೋದಿ, ಪ್ರತಿ ಸಾರ್ವಜನಿಕ ರ್ಯಾಲಿಯಲ್ಲಿ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು 'ಹೊಂದಾಣಿಕೆ' ರಾಜಕೀಯವನ್ನು ಕೊನೆಗೊಳಿಸುವುದಾಗಿ ಯಾವಾಗಲೂ ಮಾತನಾಡಿದ್ದಾರೆ. ನಾನು ಕೂಡ ಅದಕ್ಕಾಗಿ ಧ್ವನಿ ಎತ್ತಿದ್ದೇನೆ ಎಂದರು.
ಪಕ್ಷದಲ್ಲಿ ಯಡಿಯೂರಪ್ಪ ಕುಟುಂಬದ ಪ್ರಭಾವದ ಬಗ್ಗೆ ನಾನು ಪ್ರಶ್ನೆ ಮಾಡಿದೆ. ಬಿಜೆಪಿ ನಾಯಕತ್ವವನ್ನು ಪ್ರಶ್ನಿಸಿದೆ. ಯಡಿಯೂರಪ್ಪ ಸಂಸದೀಯ ಮಂಡಳಿ ಸದಸ್ಯ, ಅವರ ಕಿರಿಯ ಮಗ ರಾಜ್ಯಾಧ್ಯಕ್ಷ ಮತ್ತು ಶಾಸಕ. ಇದು ವಂಶಪಾರಂಪರ್ಯ ರಾಜಕೀಯವಲ್ಲವೇ? ನಾನು ಈ ಪ್ರಶ್ನೆಯನ್ನು ಹೈಕಮಾಂಡ್ಗೆ ಕೇಳಿದೆ."
"ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಶಿವಮೊಗ್ಗದಲ್ಲಿ ನಡೆದ ಗಲಭೆಯ ಸಮಯದಲ್ಲಿ ಹಿಂದೂಗಳನ್ನು ಬೆಂಬಲಿಸಲಿಲ್ಲ ಅಥವಾ ಹಿಂದೂ ಹಿತಾಸಕ್ತಿಗಳನ್ನು ರಕ್ಷಿಸಲಿಲ್ಲ. ಅವರ ಮಗ, ಪ್ರಸ್ತುತ ರಾಜ್ಯಾಧ್ಯಕ್ಷರು ಸಹ ಎಂದಿಗೂ ಹಿಂದೂಗಳನ್ನು ಬೆಂಬಲಿಸಿಲ್ಲ. ಅದಕ್ಕಾಗಿಯೇ ನಾವು ಅವರ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಅಭಿಪ್ರಾಯ ಹೊರಹಾಕಿದೆ. ಇದೀಗ ಅದೇ ವಿಚಾರಕ್ಕೆ ನನ್ನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಯಿತು ಎಂದರು.