ರೈಗೆ ಗೃಹಸಚಿವ ಸ್ಥಾನ ನೀಡಿದ್ರೆ ರಾಜ್ಯ ಹೊತ್ತಿ ಉರಿಯುತ್ತದೆ: ಆರ್. ಅಶೋಕ್

ಬುಧವಾರ, 26 ಜುಲೈ 2017 (16:11 IST)
ಮಂಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ರಮಾನಾಥ್ ರೈ ಅವರಿಗೆ ಗೃಹ ಸಚಿವ ಸ್ಥಾನ ನೀಡಿದಲ್ಲಿ ಜಿಲ್ಲೆ, ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಆರ್.ಅಶೋಕ್ ಗುಡುಗಿದ್ದಾರೆ.
 
ಕರಾವಳಿ ಜಿಲ್ಲೆಯಲ್ಲಿ ನಡೆದ ಗಲಭೆಯನ್ನು ನಿಗ್ರಹಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಸಚಿವ ರಮಾನಾಥ್ ರೈ, ಇನ್ನೂ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
 
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಸಚಿವ ರೈಗೆ ಗೃಹ ಸಚಿವ ಸ್ಥಾನ ನೀಡಿದಲ್ಲಿ ರಾಜ್ಯದ ಕಾನೂನು ವ್ಯವಸ್ಥೆ ಅಧೋಗತಿಯಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಸಚಿವ ರಮಾನಾಥ್ ರೈ ವಿರುದ್ಧ ಕೆಲ ಮತೀಯ ಸಂಘಟನೆಗಳು ಒಂದಾಗಿ ರೈ ಅವರನ್ನು ಸೋಲಿಸಿದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದಂತೆ ಎಂದು ರಣತಂತ್ರ ರೂಪಿಸುತ್ತಿರುವ ಹಿನ್ನೆಲೆಯಲ್ಲಿ, ರೈ ಅವರಿಗೆ ಮತ್ತಷ್ಟು ಬಲವನ್ನು ತಂದುಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗುತ್ತಿದೆ.
 
ಬಂಟ್ವಾಳ ಘರ್ಷಣೆಯ ಬಳಿಕ ಸಚಿವ ರಮಾನಾಥ್ ಅವರನ್ನು ಆರೆಸ್ಸೆಸ್ ಸೇರಿದಂತೆ ಕೆಲ ಹಿಂದೂ ಸಂಘಟನೆಗಳು ಟಾರ್ಗೆಟ್‌ ಮಾಡುತ್ತಿವೆ. ಕೋಮುಘರ್ಷಣೆಗಳನ್ನು ಬಲವಾಗಿ ಹತ್ತಿಕುವಂತಾಗಲು ಕಠಿಣ ಕ್ರಮ ತೆಗೆದುಕೊಳ್ಳಲು ಸಚಿವರಿಗೆ ಫ್ರೀ ಹ್ಯಾಂಡ್‌ ನೀಡಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ