ಬಿಜೆಪಿಗೆ ಗೆಲ್ಲುವ ವಿಶ್ವಾಸ ಇದ್ದರೆ ಬಿಬಿಎಂಪಿ ಚುನಾವಣೆ ಮಾಡಲಿ: ಡಿ.ಕೆ. ಶಿವಕುಮಾರ್ ಸವಾಲು

ಮಂಗಳವಾರ, 7 ಸೆಪ್ಟಂಬರ್ 2021 (18:58 IST)
‘ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ನಂತರ ಸಂಭ್ರಮದಲ್ಲಿರುವ ಬಿಜೆಪಿ ಇದು ಮುಂದಿನ ಚುನಾವಣೆ ದಿಕ್ಸೂಚಿ ಎಂದು ವಿಶ್ಲೇಷಿಸುತ್ತಿದೆ. ಅವರಿಗೆ ಗೆಲ್ಲುವ ವಿಶ್ವಾಸ ಇರುವುದು ನಿಜವೇ ಆದರೆ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
 
ಬ್ಯಾಟರಾಯನಪುರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಟ್ಟಾರೆ ಹೇಳಿದ್ದಿಷ್ಟು;
 
‘ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ನಾವು ಬಿಜೆಪಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದೆವು. ಈ ಬಾರಿಯೂ ನಾವು ಅವರಿಗಿಂತ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರಿಗೆ ಗೆಲ್ಲುವ ಧೈರ್ಯ, ಆತ್ಮವಿಶ್ವಾಸ ಇದ್ದರೆ ಬಿಬಿಎಂಪಿ ಚುನಾವಣೆ ನಡೆಸಲಿ. ಕುಂಟುನೆಪ ಹೇಳುತ್ತಾ ಚುನಾವಣೆ ಮುಂದೂಡುತ್ತಿರುವುದು ಯಾಕೆ? ಚುನಾವಣೆ ಮಾಡಿ, ನಾವು ಸಿದ್ಧವಾಗಿದ್ದೇವೆ. ಜನರ ಕೈಗೆ ಅಧಿಕಾರ ಸಿಗಬೇಕು ಎಂಬುದೇ ಕಾಂಗ್ರೆಸ್ ಸಿದ್ಧಾಂತ.
 
ಪಾಲಿಕೆಗಳ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸಂಭ್ರಮಿಸುತ್ತಿದೆ. ಯಾವ ಕಾರಣಕ್ಕೆ ಈ ಸಂಭ್ರಮ? ನಮಗೆ ಈ ಫಲಿತಾಂಶ ಸಮಾಧಾನ ತಂದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಅವರು 39 ಗೆದ್ದರೆ, ನಾವು 33 ಸ್ಥಾನ ಗೆದ್ದಿದ್ದೇವೆ. ನಮ್ಮ ಪಕ್ಷದ ಐವರು ಬಂಡಾಯ ಅಭ್ಯರ್ಥಿಗಳು ಗೆದ್ದಿದ್ದು, ಹೆಚ್ಚು ಕಮ್ಮಿ ಸರಿಸಮಾನ ಸ್ಥಾನದಲ್ಲಿದ್ದೇವೆ. ಬೆಳಗಾವಿಯಲ್ಲಿ ಹಿಂದೆ ನಾವು ಪಕ್ಷದಿಂದ ಅಭ್ಯರ್ಥಿಯನ್ನೇ ನಿಲ್ಲಿಸುತ್ತಿರಲಿಲ್ಲ. ಈ ಬಾರಿ ನಿಲ್ಲಿಸಿದ್ದೇವೆ. ಎಂಇಎಸ್ ನವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಸಹಾಯ ಮಾಡಿದ್ದಾರೆ. ನಾವು 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೂ ಉತ್ತಮ ಆರಂಭ ಮಾಡಿದ್ದೇವೆ. ಕಲಬುರ್ಗಿಯಲ್ಲಿ ಕಳೆದ ಬಾರಿಗಿಂತ ನಾಲ್ಕು ಸ್ಥಾನ ಹೆಚ್ಚು ಗೆದ್ದಿದ್ದೇವೆ. ಯಾರೂ ಕೂಡ ಧೃತಿಗೆಡುವ ಅಗತ್ಯವಿಲ್ಲ. ತರೀಕೆರೆ ಹಾಗೂ ಇತರೆ ಕಡೆಗಳಲ್ಲಿ ಅವರದೇ ಶಾಸಕರಿದ್ದರು. 3 ತಿಂಗಳ ಹಿಂದೆ 10 ಕಡೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ 7, ಜೆಡಿಎಸ್ 2 ಹಾಗೂ ಬಿಜೆಪಿ 1 ಸ್ಥಾನ ಮಾತ್ರ ಗೆದ್ದಿತ್ತು. ಹಾಗಾದರೆ ಇದೂ ಮುಂದಿನ ಚುನಾವಣೆ ದಿಕ್ಸೂಚಿನಾ? ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ 3.5 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದ ನಾವು ಕೇವಲ 5000 ಮತಗಳಿಂದ ಸೋತು ಅಂತರ ಕಡಿಮೆ ಮಾಡಿದ್ದೇವೆ. ಇದನ್ನು ದಿಕ್ಸೂಚಿ ಎಂದು ಹೇಳುತ್ತೇವಾ?
 
ಪ್ರಜಾಪ್ರಭುತ್ವದಲ್ಲಿ ನಾವು ಸೋಲು ಹಾಗೂ ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ಜನ ಚುನಾವಣೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಆಡಳಿತ ತೆಗೆದುಹಾಕಿ, ಮುಂದೆ ಕಾಂಗ್ರೆಸ್ ಸರ್ಕಾರ ತರಲು ಸಂಕಲ್ಪ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾವ ಬಣವೂ ಇಲ್ಲ. ಇರೋದು ಒಂದೇ ಬಣ, ಅದು ಕಾಂಗ್ರೆಸ್ ಬಣ. ಬಿಜೆಪಿಯಲ್ಲಿರುವ ಬಣ, ಇತಿಹಾಸ ನೋಡಿ. ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ. ನಮ್ಮ ಬಗ್ಗೆ ಮಾತನಾಡುವ ಸಂದರ್ಭ ಬಂದಿಲ್ಲ. ಬಿಜೆಪಿಯವರು ಕೇವಲ ಹಿಂದೂಗಳು ಮುಂದು ಎಂದರೆ, ಕಾಂಗ್ರೆಸ್ ಪಕ್ಷ ಹಿಂದೂ, ಸಿಖ್, ಮುಸಲ್ಮಾನರು, ಕ್ರೈಸ್ತರು ಎಲ್ಲರೂ ಒಂದು ಎನ್ನುತ್ತದೆ. 
 
ಬಿಜೆಪಿಯವರು ಸರ್ಕಾರದ ಆಹಾರ ಕಿಟ್ ಗಳಿಗೆ ತಮ್ಮ ಫೋಟೋ ಹಾಕಿಕೊಂಡು ಹಂಚಿದಾಗ ನಾಚಿಕೆ ಆಗಲಿಲ್ಲವಾ? ಅವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಿಸಲು ಆಗಲಿಲ್ಲ. ಆದರೆ ನಮ್ಮ ನಾಯಕರು, ಕಾರ್ಯಕರ್ತರು ತಮ್ಮ ಸ್ವಂತ ಸಂಪಾದನೆಯ ಹಣದಲ್ಲಿ ಬಡವರಿಗೆ ಆಹಾರ ಕಿಟ್ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಹೃದಯ ಶ್ರೀಮಂತಿಕೆಗೆ ಸಾಕ್ಷಿ. 
 
ಅಕ್ಟೋಬರ್ ತಿಂಗಳಲ್ಲಿ ಎಲ್ಲ ವಾರ್ಡ್ ಗಳಲ್ಲಿ ಕಾರ್ಯಕರ್ತರ ಸಭೆ ಅಥವಾ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು. ನೀವು ಕಾರ್ಯಕ್ರಮ ಏರ್ಪಡಿಸಿ, ನಾನು ಸಿದ್ದರಾಮಯ್ಯ ಅವರು ಬರುತ್ತೇವೆ. ಮಹಾತ್ಮ ಗಾಂಧೀಜಿ ಅವರು ಹುಟ್ಟುಹಬ್ಬದ ಪ್ರಯುಕ್ತ ನಾವು ಇಡೀ ರಾಜ್ಯದಲ್ಲಿ ಗಾಂಧೀಜಿ ಅವರ ಹೆಸರಲ್ಲಿ "ಕಾಂಗ್ರೆಸ್ ನಡಿಗೆ, ಜನರ ಕಡೆಗೆ" ಕಾರ್ಯಕ್ರಮ ಮಾಡಲಿದ್ದೇವೆ.
 
ನಾವಿಂದು ಬಡವರಿಗೆ ನೆರವಾಗಲು ಬಂದಿದ್ದೇವೆ. ಒಂದೂವರೆ ವರ್ಷದಿಂದ ಜನ ಉದ್ಯೋಗ, ಬೀದಿ ವ್ಯಾಪಾರ, ಆದಾಯ ಇಲ್ಲದೇ ನರಳಾಡುತ್ತಿದ್ದಾರೆ. ಉದ್ಯೋಗ ಕೊಟ್ಟವನು, ಉದ್ಯೋಗ ಪಡೆದವನು, ಅಸಂಘಟಿತ ಕಾರ್ಮಿಕರು ಯಾರಿಗೂ ಸರ್ಕಾರ ಸಹಾಯ ಮಾಡಲಿಲ್ಲ. ನಾನು, ಸಿದ್ದರಾಮಯ್ಯ, ಕೃಷ್ಣಭೈರೇಗೌಡ ಅವರು ಯಡಿಯೂರಪ್ಪ ಅವರ ಕಚೇರಿ ಬಾಗಿಲು ಬಡಿದು ಬಡವರಿಗೆ 10 ಸಾವಿರ ರು. ಆರ್ಥಿಕ ನೆರವು ನೀಡಿ ಎಂದು ಆಗ್ರಹಿಸಿದೆವು. ಅವರು ಒಂದು ಬಾರಿ 5 ಸಾವಿರ ನೀಡುವುದಾಗಿ ಘೋಷಿಸಿದರು. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಿಸಿದರು. ರಾಜ್ಯದಲ್ಲಿ ಮೊದಲ ಅಲೆಯಲ್ಲಿ 1800 ಕೋಟಿ, ಎರಡನೇ ಅಲೆಯಲ್ಲಿ 600 ಕೋಟಿಯಷ್ಟು ಪ್ಯಾಕೇಜ್ ಘೋಷಿಸಿದರು. ಯಾರಿಗಾದರೂ ಬಂತಾ? ಇಲ್ಲ. ಹಾಗಾದರೆ ಎಲ್ಲಿ ಹೋಯ್ತು ಈ ಹಣವೆಲ್ಲ?
 
ಬೀದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರಿಗೆ ಒಂದು ರೂಪಾಯಿ ಸಿಗದೇ ಜನ ನರಳುತ್ತಿದ್ದಾರೆ. ಉದ್ಯೋಗ ಕೊಟ್ಟವನು, ಉದ್ಯೋಗ ಪಡೆದವನು, ರೈತ, ಕಾರ್ಮಿಕ ಎಲ್ಲರೂ ಪರದಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಯಾರು? ಈಗ ನಾನು ಕಾರ್ಯಕ್ರಮಕ್ಕೆ ಬರುತ್ತಿರುವಾಗ ಸವಿತಾ ಸಮಾಜದವರು ಬಂದು ನಮ್ಮ ಅಳಲು ಕೇಳಬೇಕು ಎಂದು ಮನವಿ ಮಾಡಿದರು. ಅವರಿಗೆ ಸರ್ಕಾರ 5 ಸಾವಿರ ರು. ಪರಿಹಾರ ಕೊಡಲು ಆಗಲಿಲ್ಲ. ಅವರು ಕೊಡೋ 5 ಸಾವಿರದಿಂದ ಅವರ ಕಷ್ಟ ತೀರುವುದಿಲ್ಲ. ಆದರೆ ಅವರ ಜತೆ ಇದ್ದೇವೆ ಎಂದು ಹೇಳಲೂ ಸರ್ಕಾರಕ್ಕೆ ಹೃದಯ, ಮಾನವೀಯತೆ ಇಲ್ಲ.
 
ಬೆಡ್, ಔಷಧಿ, ಲಸಿಕೆಗಳಿಗೆ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿತ್ತು. ಕಡೆಗೆ ಹೆಣ ಅಂತ್ಯ ಸಂಸ್ಕಾರಕ್ಕೂ ಕ್ಯೂ ನಿಲ್ಲುವ ಪರಿಸ್ಥಿತಿಯನ್ನು ಈ ಸರ್ಕಾರ ನಿರ್ಮಾಣ ಮಾಡಿತು. ಬಿಜೆಪಿ ಸರ್ಕಾರ ಹೇಳಿದಂತೆಲ್ಲಾ ನಾವು ಕೇಳಿದ್ದೇವೆ. 
 
ಪ್ರಧಾನಿ ಮೋದಿ ಅವರು 18 ದಿನಗಳಲ್ಲಿ ಮಹಾಭಾರತ ಯುದ್ಧ ಮುಗಿದಿತ್ತು, 21 ದಿನಗಳಲ್ಲಿ ಕೊರೋನಾ ವಿರುದ್ಧದ ಯುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದರು. ಕೋವಿಡ್ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಿದರು. ಬೆಡ್ ದಂಧೆ ಬಗ್ಗೆ ಅವರ ಸಂಸದರೇ ಹೇಳಿದರು. ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಆಡಳಿತದ ಸರ್ಕಾರ ಎಲ್ಲಿದೆ ಎಂದರೆ, ಅದು ಕರ್ನಾಟಕದಲ್ಲಿದೆ. 
 
ಜನರಿಗೆ ಲಸಿಕೆ ನೀಡಲು ಬಿಜೆಪಿ ಸರ್ಕಾರ ಖಾಸಗಿ ಅವರ ಜತೆ ಒಪ್ಪಂದ ಮಾಡಿಕೊಂಡು ದರ ನಿಗದಿ ಮಾಡಿತ್ತು. ನಾವು ಶಾಸಕರ ನಿಧಿಯಿಂದ 100 ಕೋಟಿ ರು. ಹಾಕಿ, ನಾವೇ ಜನರಿಗೆ ಲಸಿಕೆ ನೀಡುತ್ತೇವೆ ಎಂದಾಗ ಸರ್ಕಾರ ಒತ್ತಡಕ್ಕೆ ಮಣಿದು ಉಚಿತ ಲಸಿಕೆ ಎಂದು ಘೋಷಿಸಿತು. ಕಾರ್ಮಿಕರು ತಮ್ಮ ಊರಿಗೆ ಹೋಗುವಾಗ ಅವರಿಂದ ಮೂರುಪಟ್ಟು ಪ್ರಯಾಣದರ ಕೀಳಲು ಪ್ರಯತ್ನಿಸಿದರು. 1 ಕೋಟಿ ರು. ನೀಡುವುದಾಗಿ ನಾವು ಒತ್ತಡ ಹಾಕಿದಾಗ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದರು. ಈ ಸರ್ಕಾರ ನಮ್ಮ ಒತ್ತಡಕ್ಕೆ ಮಣಿದು ಅಲ್ಪಸ್ವಲ್ಪ ಕೆಲಸ ಮಾಡಿದೆ. ಈ ಸರ್ಕಾರಕ್ಕೆ ಹೃದಯ, ಕಣ್ಣು, ಕಿವಿ, ಏನೂ ಇಲ್ಲ. 
 
ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಕಬ್ಬಿಣ 60 ಸಾವಿರ, ಸೀಮೆಂಟ್ ಚೀಲ 400, ಪೆಟ್ರೋಲ್ 106, ಗ್ಯಾಸ್ 900 ರು. ಗಡಿ ಮುಟ್ಟಿದೆ. ಇಲ್ಲಿರುವ ಮಹಿಳೆಯರ ಕೂಲಿ ಹೆಚ್ಚಾಗಿದೆಯಾ? ಇಲ್ಲ. ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ  350 ರೂಪಾಯಿಗೆ ಗ್ಯಾಸ್ ನೀಡಲಾಗುತ್ತಿತ್ತು. ಕಾಂಗ್ರೆಸ್ ಪಕ್ಷ ನಿಮಗೆ ಸಹಾಯ ಮಾಡಿ ಶಕ್ತಿ ತುಂಬಿದೆ ಎಂದು ಪಕ್ಕದ ಮನೆಯವರಿಗೂ ಹೇಳಿ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೊದಲ ದಿನವೇ ಬಡವರಿಗೆ ಉಚಿತ ಅಕ್ಕಿ ನೀಡಿದರು. ಇಂತಹ ಒಂದು ಕಾರ್ಯಕ್ರಮವನ್ನು ಬಿಜೆಪಿಯವರು ತೋರಿಸಲಿ, ನೋಡೋಣ.
 
ಭವಿಷ್ಯದಲ್ಲಿ ಯಾವುದೇ ಚುನಾವಣೆ ನಡೆಯಲಿ, ನಿಮಗೆ ಶಕ್ತಿ ತುಂಬುವುದೇ ಈ ಹಸ್ತ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ಅಧಿಕಾರಕ್ಕೆ ಬಂದಂತೆ ಎನ್ನುವ ಹಾಗೆ ನಾವು ಕಾರ್ಯಕ್ರಮ ನೀಡುತ್ತೇವೆ. ಬಿಜೆಪಿಯವರು ಇಂತಹ ಯಾವುದಾದರೂ ಒಂದು ಯೋಜನೆ ಕೊಟ್ಟಿದ್ದಾರಾ?
 
ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಆದರೆ ಅಮಿತ್ ಶಾ ಅವರು ಬಂದು ಯಡಿಯೂರಪ್ಪನವರು ಸ್ವಂತ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಹಾಗಾದ್ರೆ, ಯಡಿಯೂರಪ್ಪನವರು ಯಾಕೆ ಕಣ್ಣೀರು ಹಾಕಿದರು? ನೀವು ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿರಿ ಎಂದು ಹೇಳಬೇಕು? ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಇತ್ತು ಎಂಬುದಕ್ಕೆ ಇದೇ ಸಾಕ್ಷಿ.
 
ಕೃಷ್ಣಬೈರೇಗೌಡ ಅವರು ಕೇವಲ ಬ್ಯಾಟರಾಯನಪುರ ಕ್ಷೇತ್ರಕ್ಕೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಶಕ್ತಿ. ರಾಜ್ಯದ ಯಾವುದೇ ಭಾಗಕ್ಕೆ ಕಳುಹಿಸಿದರೂ ಅಲ್ಲಿ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯ ಅವರಿಗಿದೆ. ಪಕ್ಷದ ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ಪಕ್ಷದ ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರು ಕಳೆದ ಮೂರು ತಿಂಗಳಿಂದ ಆಕ್ಸಿಜನ್ ಇಲ್ಲದವರಿಗೆ ಆಕ್ಸಿಜನ್ ಕೊಟ್ಟಿದ್ದಾರೆ. ನಿಮ್ಮ ಸೇವೆ ಮಾಡಿದ್ದಾರೆ. ಕೃಷ್ಣಪ್ಪನವರು ಕೋವಿಡ್ ನಿಂದ ಸತ್ತವರ ಕುಟುಂಬಗಳಿಗೆ 25 ಸಾವಿರ ರು. ನೆರವು ನೀಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ನಾನು ಅಭಿನಂದಿಸುತ್ತೇನೆ.
 
ರಾಜ್ಯದ ಜನರಿಗೆ ವಿಘ್ನ ನಿವಾರಕ ವಿನಾಯಕ ಹಾಗೂ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ