ಬಿಜೆಪಿಯವರ ಭ್ರಷ್ಟಾಚಾರ ಕತೆ ಹೇಳಲು ಮೂರು ರಾತ್ರಿ ಸಾಲದು: ಪ್ರಿಯಾಂಕ್ ಖರ್ಗೆ

Krishnaveni K

ಗುರುವಾರ, 23 ಅಕ್ಟೋಬರ್ 2025 (09:32 IST)

ಬೆಂಗಳೂರು: ಬಿಜೆಪಿಯವರ ಬ್ರಹ್ಮಾಂಡ ಭ್ರಷ್ಟಾಚಾರದ ಕತೆ ಹೇಳಲು ಮೂರು ಹಗಲು, ಮೂರು ರಾತ್ರಿ ಸಾಲದು ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದಾರೆ.

ಪ್ರಚಾರದ ಹುಚ್ಚಿಗೆ ಬಿದ್ದಿರುವ ಪ್ರಿಯಾಂಕ್ ಖರ್ಗೆ ಬಿಜೆಪಿ ಬಗ್ಗೆ ಸುಳ್ಳು ಕತೆ ಸೃಷ್ಟಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಕ್ಕೆ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.

‘ಅಶೋಕ್ ಅವರೇ, ಮೂರು ಹಗಲು ಮೂರು ರಾತ್ರಿಯಲ್ಲಿ ಮಹಾಭಾರತದ ಕತೆಯನ್ನಾದರೂ ಹೇಳಿ ಮುಗಿಸಬಹುದು, ಆದರೆ ಬಿಜೆಪಿಯ ಭ್ರಷ್ಟಾಚಾರದ ಕತೆಗಳನ್ನು ಹೇಳಿ ಮುಗಿಸಲಾಗದು.

 

ಮಾನ್ಯ ಅಶೋಕ್ ಅವರು ತಮ್ಮ ಪಕ್ಷದ ಇತರ ನಾಯಕರ ಮೇಲಿರುವ ಕೋಪವನ್ನು ತೀರಿಸಿಕೊಳ್ಳಲೆಂದೇ ನಮ್ಮನ್ನು ಕೆಣಕುತ್ತಿದ್ದಾರೆ ಎನಿಸುತ್ತದೆ! ನಿಮ್ಮದೇ ಪಕ್ಷದವರಾಗಿದ್ದ "ಬಿಜೆಪಿಯ ವಿಷಲ್ ಬ್ಲೋವರ್" ಖ್ಯಾತಿಯ ಯತ್ನಾಳ್ ಅವರು ಹೇಳಿರುವ ಸಂಗತಿಗಳಿಗೆ ಉತ್ತರವಿದೆಯೇ?

ಈಶ್ವರಪ್ಪನವರ ನಂತರ ನೋಟ್ ಕೌಂಟಿಂಗ್ ಮೆಷಿನ್ ಇಟ್ಟಿದ್ದ ಖ್ಯಾತಿಗೆ ಯಡಿಯೂರಪ್ಪನವರ ಆಪ್ತ ಪಾತ್ರರಾಗಿದ್ದಾರೆ, ಈ ನೋಟ್ ಕೌಂಟಿಂಗ್ ಮೆಷಿನ್ ನ ಮಾಲೀಕರು ಯಾರು? ಜಗನ್ನಾಥ ಭವನವಾ? ಅಥವಾ ಕೇಶವ ಕೃಪನಾ?

ನಿಮ್ಮ ಪಕ್ಷದ ಅಧ್ಯಕ್ಷರು ಮೇಲಿಂದ ಮೇಲೆ ಮಾರಿಷಸ್, ದುಬೈ ದೇಶಗಳಿಗೆ ಹೋಗುವುದೇಕೆ, ಅಲ್ಲಿ ಎಷ್ಟು ಆಸ್ತಿಗಳನ್ನು ಮಾಡಿದ್ದಾರೆ ? ಈ ಪ್ರಶ್ನೆಗಳನ್ನು ನಿಮ್ಮವರೆ ಕೇಳಿದ್ದಾರೆ, ಇದಕ್ಕೆ ಉತ್ತರ ಹೇಳಿ.

ಒಬ್ಬ ಬಸ್ ಕಂಡಕ್ಟರ್ ಮನೆಯಲ್ಲಿ ಸಾವಿರಾರು ಕೋಟಿ ಹಣ ಸಿಗುವಂತಹ ಪವಾಡ ನಡೆಯಲು ಕಾರಣವಾಗಿದ್ದು ಯಾರು, ಇದು ಹೇಗೆ ಸಾಧ್ಯವಾಯ್ತು? ದಯವಿಟ್ಟು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಿವಮೊಗ್ಗ ಸಂಸದರಿಂದ ಉತ್ತರವನ್ನು ಪಡೆದು ಜನರಿಗೆ ತಿಳಿಸಿ’ ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ