ಮಹಾಲಿಂಗಪೂರ ಪುರಸಭೆ ಪ್ರಕರಣ: ಸಿಐಡಿಯಿಂದ ಪ್ರತ್ಯೇಕ ವಿಚಾರಣೆ

ಮಂಗಳವಾರ, 6 ಜುಲೈ 2021 (13:45 IST)
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ಎಸ್. ಸತ್ಯವತಿ ನೇತೃತ್ವದ ಸಿಐಡಿ ಅಧಿಕಾರಿಗಳ ತಂಡ  ರಾತ್ರಿವರೆಗೂ ತೇರದಾಳ ಶಾಸಕ ಸಿದ್ದು ಸವದಿ ಹಾಗು ಅಂದಿನ ರಬಕವಿ-ಬನಹಟ್ಟಿ ತಹಶೀಲ್ದಾರರಾಗಿದ್ದ ಪ್ರಶಾಂತ ಚನಗೊಂಡ ಅವರನ್ನು ಪ್ರತ್ಯೇಕವಾಗಿ ತೀವ್ರ ವಿಚಾರಣೆ ನಡೆಸಿದ ಘಟನೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರದಲ್ಲಿ ಜರುಗಿದೆ.ಕಳೆದ ಮೂರು ದಿನಗಳಿಂದ ವಿಚಾರಣೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು  ಬನಹಟ್ಟಿಯ ಅತಿಥಿ ಗೃಹದಲ್ಲಿ ವಿಚಾರಣೆ ಕೈಗೊಂಡರು.ಇದಕ್ಕೂ ಮೊದಲು ರವಿವಾರ ಮಹಾಲಿಂಗಪೂರ ಪುರಸಭಾಧ್ಯಕ್ಷೆ ಸ್ನೇಹಲ್ ಅಂಗಡಿ ಸೇರಿದಂತೆ ಕಾಂಗ್ರೆಸ್ ಸದಸ್ಯರನ್ನು ಘಟನೆ ಕುರಿತು ವಿಚಾರಿಸಿದರು. ಸಂಜೆ ಹೊತ್ತು ಸುಮಾರು ೨ ಗಂಟೆಗಳ ಕಾಲ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರನ್ನು ವಿಚಾರಣೆ ನಡೆಸುವ ಮೂಲಕ ಪ್ರತ್ಯೇಕ ಹೇಳಿಕೆ ಪಡೆದಿದ್ದು, ನಂತರ ರಾತ್ರಿ ೮ ಗಂಟೆಯಿಂದ ತೇರದಾಳ ಶಾಸಕ ಸಿದ್ದು ಸವದಿಯವರಿಂದಲೂ ಪ್ರತ್ಯೇಕ ಹೇಳಿಕೆ ಪಡೆಯಲಾಗಿದೆ ಎನ್ನಲಾಗಿದೆ. ಒಟ್ಟು ನಾಲ್ಕು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ೯೩ ಜನರ ವಿಚಾರಣೆ ನಡೆಸುತ್ತಿದ್ದಾರೆ. 
ಅಂದು ಚುನಾವಣೆ ವೇಳೆ ನಡೆದ ಗಲಾಟೆ ನಂತರ ನಡೆದ ಮತದಾನದ ಪ್ರಕ್ರಿಯೆಯಲ್ಲಿ ಸದಸ್ಯೆ ಚಾಂದನಿ ನಾಯಕ್ ಅವರ ಜುಟ್ಟು ಹಿಡಿದು ಎಳೆದಿರುವ ಶಾಸಕ ಸಿದ್ದು ಸವದಿ ಅವರ ಮೇಲಿನ ಆರೋಪದ ಕುರಿತು ವಿಚಾರಣೆ ಕೈಗೆತ್ತಿಕೊಂಡ ಅಧಿಕಾರಿಗಳಿಗೆ ಯಾವ ಮಾಹಿತಿ ದೊರಕಿದೆ ಎಂಬುದನ್ನು ಗೌಪ್ಯವಾಗಿದೆ.
ಸಿಐಡಿ ವಿಚಾರಣೆ ನಂತರ ಮಾತನಾಡಿದ ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ, ಚುನಾವಣೆ ಪ್ರಕ್ರಿಯೆಯಲ್ಲಿ ನಾನು ತೊಡಗಿದ್ದೆ, ಗಲಾಟೆ ಕುರಿತಾದ ಮಾಹಿತಿ ಸ್ಪಷ್ಟವಿಲ್ಲದರ ಬಗ್ಗೆ ಮಾಹಿತಿ ಒದಗಿಸಿದ್ದೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ