ಪ್ರತಿ ಬಾರಿಯಂತೆ ಈ ಬಾರಿ ಕೂಡಾ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠರು ಹೊರಗಡೆಯಿಂದ ಬಂದ ಉದ್ಯಮಿಗೆ ಮಣೆ ಹಾಕಿ ಟಿಕೆಟ್ ನೀಡುವ ಕಾಯಕ ಮುಂದುವರಿಸಿದ್ದರಿಂದ ಜೆಡಿಎಸ್ ಶಾಸಕರು ಅಸಮಧಾನಗೊಂಡಿದ್ದು, ಭಿನ್ನಮತ ಭುಗಿಲೆದ್ದಿದೆ ಎಂದು ಮಾಗಡಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಗಡಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ, ರಾಜ್ಯಸಭೆ ಚುನಾವಣೆಯಲ್ಲಿ ಹೊರಗಿನಿಂದ ಬಂದ ಟಿಕೆಟ್ ಆಕಾಂಕ್ಷಿಗಳನ್ನು ಮತ್ತು ಪಕ್ಷೇತರ ಶಾಸಕರನ್ನು ನಂಬಿ ತಮ್ಮ ಪಕ್ಷದ ಶಾಸಕರನ್ನು ಕಳೆದು ಕೊಂಡಿದ್ದಾರೆ. ಆದ್ದರಿಂದಲೇ ಜೆಡಿಎಸ್ ಪಕ್ಷ ಬೀದಿಪಾಲಾಗುವ ಹಂತಕ್ಕೆ ತಲುಪಿದೆ ಎಂದು ಲೇವಡಿ ಮಾಡಿದ್ದಾರೆ.
ನಾನು ಕಷ್ಟದಲ್ಲಿರುವ ಸಂದರ್ಭದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಆಶ್ರಯ ನೀಡಿದ್ದರಿಂದ ಅವರ ಪರವಾಗಿದ್ದೇನೆ. ಸಂಕಷ್ಟದಲ್ಲಿರುವಾಗ ಕುಮಾರಸ್ವಾಮಿಯವರ ಮನೆಗೆ ತೆರಳಿ ಸಹಾಯ ಯಾಚಿಸಿದ್ದೆ. ಆದರೆ, ಅವರು ನನಗೆ ಸಹಾಯ ಮಾಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.