ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟಿ.ಎಫ್.ಹಾದಿಮನಿ, ಮೋದಿಯವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿರುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮೋದಿಜೀ ಅವರ ಬಗ್ಗೆ ಕೋಟ್ಯಂತರ ಜನರು ಗೌರವ- ಅಭಿಮಾನ ಹೊಂದಿದ್ದು, ಅವರ ಮನಸ್ಸಿಗೆ ಈ ಪೋಸ್ಟ್ ನೋಡಿ ನೋವಾಗಿದೆ ಎಂದು ತಿಳಿಸಿದರು. ಇದು ಮೋದಿಯವರಿಗೆ ಕೆಟ್ಟ ಹೆಸರು ತರುವ ದೊಡ್ಡ ತಪ್ಪು ಎಂದು ಆಕ್ಷೇಪಿಸಿದರು.
ಬಿಜೆಪಿ ಪ್ರತಿಭಟನೆ: ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕಿನಲ್ಲಿ ನಾಳೆ (ಜೂನ್ 17) ದೊಡ್ಡ ಪ್ರತಿಭಟನೆ ನಡೆಯಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಪ್ರಮುಖರಾದ ಡಾ.ಅಶ್ವತ್ಥನಾರಾಯಣ್, ಗೋಪಾಲಯ್ಯ, ಬೆಂಗಳೂರಿನ ನಮ್ಮ ಸಂಸದರು, ಶಾಸಕರು ಭಾಗವಹಿಸುತ್ತಾರೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.
ಆರ್ಸಿಬಿ ವಿಜಯೋತ್ಸವದಲ್ಲಿ 11 ಜನ ಆರ್ಸಿಬಿ ತಂಡದ ಅಭಿಮಾನಿಗಳು ಸತ್ತಿದ್ದು, ಅವರ ಸಾವಿಗೆ ಸರಕಾರವೇ ನೇರ ಕಾರಣ ಎಂದು ಆರೋಪಿಸಿದರು. ದುರ್ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು. ಪೊಲೀಸ್ ಅಧಿಕಾರಿಗಳ ಅಮಾನತನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ನಿವೃತ್ತ ಪೊಲೀಸ್ ಆಯುಕ್ತ ಮತ್ತು ಪಕ್ಷದ ಮುಖಂಡ ಭಾಸ್ಕರ ರಾವ್ ಅವರು ಮಾತನಾಡಿ, ಪ್ರಧಾನಿಯವರನ್ನು ಅವಮಾನ ಮಾಡಿದ್ದು ಖಂಡನೀಯ. ಹಾದಿಮನಿ ಬಂಧನಕ್ಕೆ ಹಾಗೂ ಹಿನ್ನೆಲೆಯ ತನಿಖೆ ಮಾಡುವಂತೆ ಕೋರಿದ್ದೇವೆ. ಹಾದಿಮನಿ ಮತ್ತು ಇಂಥ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಿದ್ದಾಗಿ ಹೇಳಿದರು.
ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ ಅವರು ಮಾತನಾಡಿ, ಮೋದಿಜೀ ಅವರ ವಿರುದ್ಧ ಹಾದಿಮನಿ, ಫೇಸ್ ಬುಕ್ನಲ್ಲಿ ಹಾಕಿರುವ ಪೋಸ್ಟ್ ಸಮಾಜದಲ್ಲಿ ಶಾಂತಿ- ಸುವ್ಯವಸ್ಥೆಯನ್ನು ಕದಡುವಂತಿದೆ. ಜನರ ಭಾವನೆಗೆ ಇದರಿಂದ ಧಕ್ಕೆಯಾಗಿದೆ. ಅವರು ಇಂಥ ಅವಹೇಳನಕಾರಿ ಪೋಸ್ಟ್ಗಳನ್ನು ನಿರಂತರವಾಗಿ ಹಾಕುತ್ತಿದ್ದಾರೆ ಎಂದು ಟೀಕಿಸಿದರು. ಅವರನ್ನು ಬಂಧಿಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾಗಿ ತಿಳಿಸಿದರು.