ಬೆಂಗಳೂರು: ಕೆಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ ಇಂದೂ ಅಬ್ಬರಿಸಲಿದೆ. ರಾಜ್ಯ ಈ ಕೆಲವು ಜಿಲ್ಲೆಗಳಲ್ಲಿ ಇಂದೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ.
ಹವಾಮಾನ ವರದಿಗಳ ಪ್ರಕಾರ ಜೂನ್ 2 ರವರೆಗೂ ಮಳೆ ಮುಂದುವರಿಯಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಿನ್ನೆಯೂ ಮಳೆಯಿತ್ತು. ಇಂದೂ ಈ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಹವಾಮಾನ ವರದಿ ಪ್ರಕಾರ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದೂ ಭಾರೀ ಮಳೆಯಾಗಲಿದೆ.
ಉಳಿದಂತೆ ಹಾಸನ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು, ಕೋಲಾರ, ತುಮಕೂರು, ಚಾಮರಾಜನಗರ, ಶಿವಮೊಗ್ಗ, ರಾಯಚೂರು, ಹಾವೇರಿ, ಕಲಬುರಗಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.
ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆಯ ಕೇರಳ, ಮಹಾರಾಷ್ಟ್ರದಲ್ಲೂ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಗಡಿ ಭಾಗದ ರಾಜ್ಯಗಳಿಗೆ ನೆರೆಯ ಭೀತಿಯಿದೆ. ನದಿ ದಡಗಳು, ಕಡಲತೀರಗಳಿಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.