ಬೆಂಗಳೂರು: ರಾಜ್ಯಾದ್ಯಂತ ಈಗ ಉರಿಬಿಸಿಲು ತಾಂಡವವಾಡುತ್ತಿದೆ. ಇಂದು ರಾಜ್ಯದ ಈ ಕೆಲವು ಜಿಲ್ಲೆಗಳಲ್ಲಿ ಈ ವರ್ಷದ ಗರಿಷ್ಠ ಮಟ್ಟದ ತಾಪಮಾನ ದಾಖಲಾಗಲಿದೆ ಎನ್ನುತ್ತಿದೆ ಹವಾಮಾನ ವರದಿಗಳು.
ಕಳೆದ ವಾರ ಬಿಸಿಲಿನ ನಡುವೆಯೂ ಕೆಲವು ಕಡೆಗಳಲ್ಲಿ ಮಳೆ ತಂಪು ನೀಡಿತ್ತು. ಆದರೆ ಈ ವಾರ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಜನರು ಉರಿಬಿಸಿಲಿಗೆ ತತ್ತರಿಸಿ ಹೋಗುತ್ತಿದ್ದಾರೆ. ಇಂದಂತೂ ತಾಪಮಾನ ವಿಪರೀತ ಏರಿಕೆಯಾಗಲಿದೆ.
ವಿಶೇಷವಾಗಿ ರಾಯಚೂರು, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಇಂದು ಗರಿಷ್ಠ ತಾಪಮಾನ 41 ಡಿಗ್ರಿಗೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ. ಉಳಿದಂತೆ ಕೊಪ್ಪಳ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ತಲುಪಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಗರಿಷ್ಠ ತಾಪಮಾನ 36 ಡಿಗ್ರಿಯಷ್ಟಿತ್ತು, ಇಂದೂ ಕೂಡಾ ಅದೇ ವಾತಾವರಣವಿರಲಿದೆ. ರಾಜ್ಯದ ಸರಾಸರಿ ಗರಿಷ್ಠ ತಾಪಮಾನ ಇಂದು 36 ಡಿಗ್ರಿಯಷ್ಟಿರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.