ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬೇಗೆ ಈಗಾಗಲೇ ಶುರುವಾಗಿದೆ. ಇಂದು ತಾಪಮಾನ ಮತ್ತಷ್ಟು ಏರಿಕೆಯಾಗಲಿದ್ದು, ಬಿಸಿ ಹೆಚ್ಚಾಗಲಿದೆ ಎನ್ನುತ್ತಿದೆ ಹವಾಮಾನ ವರದಿಗಳು.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ. ಮಾರ್ಚ್ ನಿಂದ ಕಡು ಬೇಸಿಗೆ ಆರಂಭವಾಗಲಿದೆ ಎಂದು ಈಗಾಗಲೇ ಹವಾಮಾನ ತಜ್ಞರು ಹೇಳಿದ್ದರು. ಅದರಂತೆ ಮೊದಲ ವಾರದಲ್ಲೇ ಏರಿಕೆ ಕಂಡುಬರುತ್ತಿದೆ.
ನಿನ್ನೆ ರಾಜ್ಯದ ಗರಿಷ್ಠ ತಾಪಮಾನ 31 ಡಿಗ್ರಿಯಷ್ಟಿತ್ತು. ಆದರೆ ಇಂದು ದಿಡೀರ್ 33 ಡಿಗ್ರಿಯಷ್ಟು ಕಂಡುಬರುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 18 ಡಿಗ್ರಿಯಷ್ಟು ಕಂಡುಬರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಇಂದು ಶುಭ್ರ ಆಕಾಶವಿರಲಿದ್ದು, ಹಗಲಿಡೀ ಬಿಸಿಲಿನ ವಾತಾವರಣವಿರಲಿದೆ.
ಹೀಗಾಗಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಸೆಖೆ ಹೆಚ್ಚಾಗಲಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34-36 ಡಿಗ್ರಿಯಷ್ಟು ಏರಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವುದು.