ಬೆಂಗಳೂರು: ಲಾಟರಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ''ರಣದೀಪ್ " ಆಡಳಿತ ಹೇರಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಮಂಗಳವಾರ ಕಾಂಗ್ರೆಸ್ನ 11 ಸಚಿವರ ಜೊತೆ ಸುರ್ಜೇವಾಲಾ ಸಭೆ ನಡೆಸಿರುವ ಕುರಿತು ಮಾಧ್ಯಮ ವರದಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಅಶೋಕ, ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯಾ? ಗುರುವಾರದ ಸಂಪುಟ ಸಭೆಯೂ ಸುರ್ಜೆವಾಲಾ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಾ? ಎಂದು ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ, ಪಂಚತಾರಾ ಹೋಟೆಲ್ ಗಳಲ್ಲಿ ಅತೃಪ್ತ ಶಾಸಕಾರ ದೂರು-ದುಮ್ಮಾನ ಕೇಳುತ್ತಿರುವ, ಮಂತ್ರಿಗಳ ಸಾಧನೆ ಪರಾಮರ್ಶೆ ಮಾಡುತ್ತಿರುವ ಸುರ್ಜೇವಾಲ ಅವರು, ಗುರುವಾರ ವಿಧಾನಸೌಧದಲ್ಲಿ ನಡೆಯುವ ಸಂಪುಟ ಸಭೆಗೂ ಬಂದು ತಾವೇ ಅಧ್ಯಕ್ಷತೆ ವಹಿಸಿದರೂ ಅಚ್ಚರಿ ಪಡಬೇಕಿಲ್ಲ.
ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತವಿಲ್ಲ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ, ತಮಗೆ ಬೇಕಾದವರನ್ನು ಸಿಎಂ ಆಗಿ ನೇಮಕ ಮಾಡಲು ರಾಹುಲ್ ಗಾಂಧಿ ಅವರಿಗೆ ಶಕ್ತಿ ಇಲ್ಲ.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನವನ್ನ ಸಮರ್ಥವಾಗಿ ನಿಭಾಯಿಸಬಲ್ಲ ಒಬ್ಬ ನಾಯಕನೂ ಇಲ್ಲದೆ ಕಾಂಗ್ರೆಸ್ ಹೈಕಮಾಂಡ್ ತ್ರಿಶಂಕು ಸ್ಥಿತಿಯಲ್ಲಿದೆ.