ಪ್ರೀತಿಸಿ ಮದುವೆಯಾಗಿ ಬಂದವಳ ಕೊಲೆಗೈದನಾ ಪ್ರಿಯತಮ!

ಭಾನುವಾರ, 12 ಆಗಸ್ಟ್ 2018 (15:38 IST)
ಮನೆ ಬಿಟ್ಟು ನಂಬಿ ಬಂದ ಯುವತಿ ಜತೆಗೆ ಸುಖ ಸಂಸಾರ ನಡೆಸಬೇಕಿದ್ದ ಕಿರಾತಕ ಪತಿ ತನ್ನ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘೋರ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಪ್ರೀತಿಸಿ ಕೈ ಹಿಡಿದು ಬಂದವಳನ್ನೇ ಪ್ರಿಯಕರ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಸುಮಾ ಅಬ್ಬಾರ (21) ಕೊಲೆಯಾದ ದುರ್ದೈವಿ. ಸುಮಾ ಪತಿ ಯುವರಾಜ ತನ್ನ ಕುಟುಂಬ ಸದಸ್ಯರ ಜತೆಗೆ ಸೇರಿಕೊಂಡು ತಡರಾತ್ರಿ ಸುಮಾಳ ಮೇಲೆ ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆ ಬಳಿಕ ಮನೆಯಲ್ಲೇ ಶವ ಬಿಟ್ಟು, ಸುಮಾಳ ಪತಿ ಯುವರಾಜ, ಮಾವ ಬಸಪ್ಪ ಅಬ್ಬಾರ, ಅತ್ತೆ ಮಹಾದೇವಿ ಅಬ್ಬಾರ, ಮೈದುನ ವೀರಣ್ಣ ಹಾಗೂ ಯಲ್ಲಪ್ಪ ಅಬ್ಬಾರ ಪರಾರಿಯಾಗಿದ್ದಾರೆ. ಹುಡುಗನ ಕುಟುಂಬ ಸದಸ್ಯರು ಸೇರಿಕೊಂಡೇ ನನ್ನ ಪುತ್ರಿಯನ್ನು ಕೊಲೆಗೈದಿದ್ದಾರೆ ಎಂದು ಸುಮಾಳ ಪಾಲಕರು ಆರೋಪಿಸುತ್ತಿದ್ದಾರೆ. ಕೆಲ ವರ್ಷಗಳಿಂದ ಸುಮಾ ಹಾಗೂ ಯುವರಾಜ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಉಭಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬಸ್ಥರ ವಿರೋಧದ ನಡುವೆಯೂ 8 ತಿಂಗಳ ಹಿಂದೆಯಷ್ಟೇ ಸುಮಾ ಮತ್ತು ಯುವರಾಜ ಬೈಲಹೊಂಗಲ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಯುವರಾಜನ ಪಾಲಕರು ಈ ಜೋಡಿಯನ್ನು ಮನೆ ತುಂಬಿಸಿಕೊಂಡಿದ್ದರು.

ಆದರೆ ಯುವರಾಜ ತನ್ನ ಕುಟುಂಬ ಸದಸ್ಯರ ಮಾತು ಕೇಳಿ ಸುಮಾಳ ವಿರುದ್ಧ ತಿರುಗಿ ಬಿದ್ದು, ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪವನ್ನು ಸುಮಾ ಪಾಲಕರು ಮಾಡುತ್ತಿದ್ದಾರೆ. ಈ ಕುರಿತು ದೊಡವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿ ಗಂಡ ಸೇರಿದಂತೆ ಆತನ ಮನೆಯವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.  

 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ