'ನಿಮಗೆ ಬದ್ದತೆ ಇದ್ರೆ ಬಿಜೆಪಿ ಕಚೇರಿ ಮುಂದೆ ಲವ್ ಜಿಹಾದ್ ಕಾನೂನು ತರಲು ಪ್ರತಿಭಟಿಸಿ'

ಶುಕ್ರವಾರ, 13 ಆಗಸ್ಟ್ 2021 (13:43 IST)
ಉಳ್ಳಾಲ(ಆ.13): ಕಳೆದ ವಾರ ಮಂಗಳೂರು ಬಳಿಯ ಉಳ್ಳಾಲದ ಮಾಜಿ ಶಾಸಕ ದಿ.ಬಿ.ಎಂ.ಇದಿನಬ್ಬ ಅವರ ಮನೆ ಮೇಲೆ ನಡೆದಿದ್ದ ಎನ್ಐಎ ದಾಳಿ ದೆಶಾದ್ಯಂತ ಸದ್ದು ಮಾಡಿತ್ತು. ಆದರೆ ಈ ದಾಲಿ ಬೆನ್ನಲ್ಲೇ ಅವರ ಮನೆಗೆ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಮುತ್ತಿಗೆ ನಡೆಸಿದ್ದರು, ಇದು ಲವ್ ಜಿಹಾದ್ ತಿರುವು ಪಡೆದಿತ್ತು. ಸದ್ಯ ಈ ಪ್ರಕರಣ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಯು. ಟಿ. ಖಾದರ್ ಹಿಂದೂ ಪರ ಸಂಘಟನೆಗಳ ನಡೆಯನ್ನು ಖಂಡಿಸಿದ್ದಾರೆ.

ಯುವತಿ ಬಗ್ಗೆ ಕೇಳಲು ಇವರು ಯಾರು?
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಯು. ಟಿ. ಖಾದರ್ ಆ ಮನೆಯ ದೀಪ್ತಿ ಮಾರ್ಲ ಬಗ್ಗೆ ಕೇಳೋಕೆ ಈ ಸಂಘಟನೆಯವರು ಯಾರು? ಇವರಿಗೆ ಅವರ ತಂದೆ ತಾಯಿ ಬಂದು ಏನಾದ್ರೂ ಕಂಪ್ಲೇಟ್ ಕೊಟ್ಟಿದ್ದಾರಾ? ಆ ಹುಡುಗಿ ಬಗ್ಗೆ ಸಮಸ್ಯೆ ಇದ್ರೆ ಅವಳ ಮನೆಯವರು ಕಂಪ್ಲೇಂಟ್ ಕೊಡ್ತಾರೆ. ಅವರ ಮನೆಯ ವಿಚಾರ ಅವರು ನೋಡಿಕೊಳ್ತಾರೆ, ಅದೆಲ್ಲ ಇವರಿಗೆ ಯಾಕೆ? ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಉಪವಾಸ ಮಾಡಿ ಪ್ರತಿಭಟಿಸಿ, ತೊಂದರೆ ಕೊಡಬೇಡಿ
ಇದೇ ವೇಳೆ ತಮ್ಮ ಕ್ಷೇತ್ರಕ್ಕೆ ಬಂದು ತೊಂದರೆ ಕೊಡಬೇಡಿ ಎಂದು ಎಚ್ಚರಿಸಿರುವ ಯು. ಟಿ. ಖಾದರ್ 'ಲವ್ ಜಿಹಾದ್ ಮತ್ತೊಂದು ಇನ್ನೊಂದು ಅಂತ ಅಜೆಂಡಾ ಇಟ್ಟು ಪ್ರತಿಭಟನೆ ಯಾಕೆ ಮಾಡ್ತೀರಾ? ಹಾಗಿದ್ರೆ ಲವ್ ಜಿಹಾದ್ ವಿರುದ್ದ ಕಾನೂನು ತರಲು ಸಾಯುವವರೆಗೆ ಉಪವಾಸ ಮಾಡಿ. ಅದು ಬಿಟ್ಟು ಹೊರಗಿನವರು ನನ್ನ ಉಳ್ಳಾಲ ಕ್ಷೇತ್ರಕ್ಕೆ ಬಂದು ಯಾಕೆ ಸಮಸ್ಯೆ ಮಾಡ್ತೀರಾ?' ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಸಹೋದರಿ ಹಿಂದೂ ಸಹೋದರನನ್ನ ಮದುವೆ ಆಗಿಲ್ವಾ?
ಇನ್ನು ಲವ್ ಜಿಹಾದ್ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಯು. ಟಿ. ಖಾದರ್ ಮುಸ್ಲಿಂ ಸಹೋದರಿ ಹಿಂದೂ ಸಹೋದರನನ್ನ ಮದುವೆ ಆಗಿಲ್ವಾ? ಹೀಗೆ ಮದುವೆ ಆದವರು ರಾಜಕೀಯಕ್ಕೆ ಬಂದು ಜನಪ್ರತಿನಿಧಿ ಆದವರೂ ಇದ್ದಾರೆ. ನಿಮಗೆ ಬದ್ದತೆ ಇದ್ರೆ ಬಿಜೆಪಿ ಕಚೇರಿ ಮುಂದೆ ಲವ್ ಜಿಹಾದ್ ಕಾನೂನು ತರಲು ನಾಳೆಯಿಂದ ಪ್ರತಿಭಟಿಸಿ. ಪರಸ್ಪರ ಮದುವೆ ಆಗುವ ಕಾನೂನುಗಳನ್ನ ರದ್ದು ಮಾಡುವಂತೆಯೂ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸಿ, ದೇಶದ ಕಾನೂನು, ಸಂವಿಧಾನ ಒಂದು ಹೇಳುವಾಗ ಫತ್ವಾ ಹೊರಡಿಸೋಕೆ ಇವರ್ಯಾರು? ಎಂದು ಸವಾಲೆಸೆದಿದ್ದಾರೆ.
ಸಂಘಟನೆಯವರ ಬಣ್ಣ ಮೊದಲು ಬಯಲಾಗಬೇಕು
ಯಾರ್ಯಾರ ಮನೆಯ ಮುಂದೆ ಹೋಗಿ ಪ್ರತಿಭಟಿಸೋಕೆ ಇವರ್ಯಾರು? ಎಂದು ಪ್ರಶ್ನಿಸಿರುವ ಯು. ಟಿ. ಖಾದರ್ 'ಈ ಸಂಘಟನೆಯವರ ಬಣ್ಣ ಮೊದಲು ಬಯಲಾಗಬೇಕು. ಇವತ್ತು ಉಳ್ಳಾಲ ವ್ಯಾಪ್ತಿಯಲ್ಲಿ ಮಾತ್ರ ಭಯೋತ್ಪಾದನೆ ಚಟುವಟಿಕೆ ನಡೆದಿಲ್ಲ. ಇಲ್ಲಿನ ಜನರು ಪರಸ್ಪರ ಭಾವೈಕ್ಯತೆ ಮತ್ತು ಪ್ರೀತಿಯಿಂದ ಬದುಕುತ್ತಿದ್ದಾರೆ. ದೇಶವನ್ನು ಪ್ರೀತಿಸುವ ದೇಶಪ್ರೇಮಿ ಜನರು ಈ ಭಾಗದಲ್ಲಿ ಇದ್ದಾರೆ. ದೇಶದ್ರೋಹದ ಕೆಲಸವನ್ನು ಯಾರೂ ಕ್ಷಮಿಸಲ್ಲ, ಯಾರೂ ಬೆಂಬಲಿಸಲ್ಲ. ಉಳ್ಳಾಲದ ನಾಗರಿಕರು ಇದನ್ನ ಒಪ್ಪಲ್ಲ ಎಂದೂ ಹೇಳಿದ್ದಾರೆ.
NIA ದಾಳಿ ಬಗ್ಗೆ ಮಾತು
ಇನ್ನು ಮಾಜಿ ಶಾಸಕರ ಮನೆ ಮೇಲೆ ನಡೆದ ಎನ್ಐಎ ದಾಳಿ ಬಗ್ಗೆ ಮಾತನಾಡಿದ ಯು. ಟಿ. ಖಾದರ್ ಮೊನ್ನೆ ಘಟನೆಯಲ್ಲಿ ಎನ್ ಐಎ ಬಂದು ಒಬ್ಬನನ್ನ ಅರೆಸ್ಟ್ ಮಾಡಿದ್ದಾರೆ. ಹೀಗಾಗಿ ತನಿಖೆ ನಡೆಯುವಾಗ ಅದರ ಬಗ್ಗೆ ಯಾರೂ ಮಾತನಾಡುವುದು ಸರಿಯಲ್ಲ. ಅದರ ತನಿಖೆ ನಡೆದು ಸಮಗ್ರವಾದ ವಿಚಾರ ಬೆಳಕಿಗೆ ಬರಲಿ. ಎನ್ ಐಎ ಬಂದಿರೋದು ಗಂಭೀರ ವಿಚಾರ, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಆದರೆ ಈ ಬಗ್ಗೆ ರಾಜಕೀಯ ಮಾಡಿ ಯಾರೂ ಗೊಂದಲ ಸೃಷ್ಟಿಸಬಾರದು. ಇದನ್ನ ರಾಜಕೀಯ ಮಾಡಲು ಹೋದ್ರೆ ಕ್ಷೇತ್ರದ ಜನ ಯಾರೂ ಕ್ಷಮಿಸಲ್ಲ. ಅಪರಾಧಿ ಆಗಿದ್ರೆ ಉಳ್ಳಾಲದ ಜನರು ಅವರನ್ನ ಯಾವತ್ತೂ ಕ್ಷಮಿಸಲ್ಲ. ಅವರು ನಿರಪರಾಧಿ ಆಗಿದ್ರೆ ಯಾಕೆ ಅವರ ಮೇಲೆ ಆರೋಪ ಬಂತು ಅನ್ನೋದ್ರ ಬಗ್ಗೆ ತನಿಖೆ ನಡೆಯಲಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ