ಮೈಸೂರು: ಸೋಷಿಯಲ್ ಮೀಡಿಯಾದಲ್ಲಿ ಕೋಮುಧ್ವೇಷದ ಪೋಸ್ಟ್ ಪ್ರಕಟಿಸಿದ್ದರಿಂದ ಮೈಸೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಕಲ್ಯಾಣಗಿರಿ ಬಡಾವಣೆಯ ಯುವಕನೊಬ್ಬ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಬಗ್ಗೆ ಅವಹೇಳನಕಾರೀ ಪೋಸ್ಟ್ ಹಾಕಲಾಗಿತ್ತು. ಜೊತೆಗೆ ಅನ್ಯಧರ್ಮಕ್ಕೆ ಅವಹೇಳನ ಮಾಡುವಂತಹ ಪೋಸ್ಟ್ ಮಾಡಲಾಗಿತ್ತು.
ಇದರಿಂದ ಕೆರಳಿದ ಮುಸ್ಲಿಂ ಯುವಕರು ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ. ಘಟನೆಯಲ್ಲಿ 14 ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿದ್ದು, ಪೊಲೀಸ್ ವಾಹನಗಳೂ ಜಖಂಗೊಂಡಿದೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಆಗಲೂ ಗಲಾಟೆ ಮಾಡುತ್ತಿದ್ದ ಯುವಕರು ದಾಂಧಲೆ ನಿಲ್ಲಿಸದೇ ಇದ್ದಾಗ ಪೊಲೀಸರು ಅಶ್ರವಾಯು ಸಿಡಿಸಿ ಗುಂಪು ಚದುರಿಸಿದರು. ಸ್ಥಳದಲ್ಲಿ ಪೊಲೀಸರು, ರಾಜಕೀಯ ಮುಖಂಡರು ಶಾಂತಿ ಕಾಪಾಡುವಂತೆ ಮನವಿ ಮಾಡಿದರೂ ಯುವಕರ ಗುಂಪು ಮಾತು ಕೇಳಲಿಲ್ಲ. ಸದ್ಯಕ್ಕೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಪೊಲೀಸರು ಭದ್ರತೆ ಒದಗಿಸಿದ್ದಾರೆ.