ಹರ್ಷ ಹತ್ಯೆಯ ಆರೋಪಿಗಳಿಬ್ಬರ ಹೆಸರು ಬಹಿರಂಗ: ಶಿವಮೊಗ್ಗದಲ್ಲಿ ಕರ್ಫ್ಯೂ

ಮಂಗಳವಾರ, 22 ಫೆಬ್ರವರಿ 2022 (19:06 IST)
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಇಬ್ಬರು ಪ್ರಮುಖ ಆರೋಪಿಗಳ ಹೆಸರು ಬಹಿರಂಗವಾಗಿದ್ದು, ಶಿವಮೊಗ್ಗದ ಬುದ್ಧನಗರದ ಖಾಸಿಫ್ ಮತ್ತು ಜೆಪಿ‌ ನಗರದ ಸೈಯದ್ ನದೀಮ್ ಎಂದು ಮಾಹಿತಿ ಲಭ್ಯವಾಗಿದೆ.
ಹತ್ಯೆ ನಡೆದು 24 ಗಂಟೆಗಳ ಒಳಗಾಗಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇಂದು, ಸೋಮವಾರ ರಾತ್ರಿಯಿಂದ ನಾಡಿದ್ದು ಬುಧವಾರ ಬೆಳಗ್ಗೆ ಆರು ಗಂಟೆವರೆಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿ ಮಾಡಿರುವುದಾಗಿ ಎಸ್ ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ನಾಳೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ‌ ಮಾಡಲಾಗಿದ್ದು, ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ.ಅಗತ್ಯ ಬಿದ್ದರೆ ಕರ್ಪ್ಯೂ ಮುಂದುವರಿಸುವುದಾಗಿ ಎಸ್ ಪಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಹೆಚ್ಚುವರಿಯಾಗಿ ಪೊಲೀಸ್ ಪಡೆಗಳು ಆಗಮಿಸಿದ್ದು, ರಾತ್ರಿಯೇ 400ಕ್ಕೂ ಹೆಚ್ಚು ಪೊಲೀಸರು ಆಗಮಿಸಿದ್ದಾರೆ.
ಅನಾವಶ್ಯಕವಾಗಿ ಓಡಾಡುವವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ನಗರದಲ್ಲಿ ಶಾಂತಿ ಕಾಪಾಡಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ನಿನ್ನೆ ರಾತ್ರಿ ಕಾಮತ್ ಪೆಟ್ರೋಲ್ ಬಂಕ್ ಎದುರಿನ ಭಾರತಿ ಕಾಲನಿಯಲ್ಲಿ ಹರ್ಷ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ