ಪರಿಸರ ಪ್ರವಾಸೋದ್ಯಮಕ್ಕೆ ಹೊಸ ನೀತಿ: ಈಶ್ವರ ಖಂಡ್ರೆ

ಮಂಗಳವಾರ, 5 ಸೆಪ್ಟಂಬರ್ 2023 (10:35 IST)
ಬೆಂಗಳೂರು : ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದರೂ, ಅದರ ಸಮರ್ಪಕ ಬಳಕೆ ಆಗಿಲ್ಲ. ಪ್ರಕೃತಿ, ಪರಿಸರ ಮತ್ತು ಅರಣ್ಯ ನಾಶವಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಹೊಸ ನೀತಿ ತರುವ ಅಗತ್ಯವಿದೆ ಎಂದು ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದರು.

ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಸಾಹಸ ಪ್ರವಾಸೋದ್ಯಮವನ್ನೂ ಪರಿಸರ ಪ್ರವಾಸೋದ್ಯಮದ ಭಾಗ ಮಾಡಬಹುದು. ಆಗ ಇದು ಹೆಚ್ಚು ಜನರನ್ನು ಆಕರ್ಷಿಸುತ್ತದೆ ಎಂದು ಹೇಳಿದರು. 

ರಿವರ್ ರಾಫ್ಟಿಂಗ್, ಚಾರಣವೇ ಮೊದಲಾದ ಪರಿಸರ ಸಂಬಂಧಿತ ಪ್ರವಾಸೋದ್ಯಮಕ್ಕೆ ಇಂದಿನ ಯುವಜನರಲ್ಲಿ ಹೆಚ್ಚಿನ ಆಸಕ್ತಿ ಇದೆ. ಹೀಗಾಗಿ ಅರಣ್ಯ ಪ್ರದೇಶದೊಳಗೆ ಇರಬಹುದಾದ ಇಂತಹ ತಾಣಗಳಲ್ಲಿ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಹೊಸ ನೀತಿ ರೂಪಿಸಲು ವರದಿ ಸಲ್ಲಿಸುವಂತೆ ತಿಳಿಸಿದರು.

ಈ ಸಂಬಂಧ ಪರಿಸರ ತಜ್ಞರು, ಪ್ರವಾಸೋದ್ಯಮ ಇಲಾಖೆ ಮತ್ತಿತರ ಬಾಧ್ಯಸ್ಥರೊಂದಿಗೆ ಚರ್ಚಿಸಿ ರೂಪುರೇಷೆ ರೂಪಿಸಿ. ಕರ್ನಾಟಕದಲ್ಲಿ 300 ಕಿ.ಮೀ.ಗೂ ಹೆಚ್ಚಿನ ಕರಾವಳಿ ಇದ್ದು, ಇಲ್ಲಿಯೂ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶಗಳು ಹೆಚ್ಚಾಗಿವೆ. ಈ ಸಾಮರ್ಥ್ಯದ ಸದ್ಬಳಕೆಗೆ ಹೆಚ್ಚಿನ ಹಣಕಾಸಿನ ಹೂಡಿಕೆ ಬೇಕಾಗುತ್ತದೆ. ಬಂಡವಾಳ ಆಕರ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆಯೂ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ