ಹಿಂದೂ ದೇವತೆಗಳ ಅವಮಾನಕ್ಕೆ ನಿಡುಮಾಮಿಡಿ ಸ್ವಾಮೀಜಿ ಕ್ಷಮೆಯಾಚಿಸಲಿ: ರಹೀಂ ಉಚ್ಚಿಲ್

ಶನಿವಾರ, 21 ಅಕ್ಟೋಬರ್ 2017 (18:37 IST)
ಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ಹಿಂದೂ ಧರ್ಮದ ದೇವರ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವ ನಿಡುಮಾಮಿಡಿ ಶ್ರೀಗಳ ಹೇಳಿಕೆಯನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ರಹೀಂ ಉಚ್ಚಿಲ್ ತೀವ್ರವಾಗಿ ಖಂಡಿಸಿದ್ದಾರೆ.

ಸಮಾಜದ ಎಲ್ಲಾ ವರ್ಗಕ್ಕೂ ಮಾರ್ಗದರ್ಶನ ನೀಡಬೇಕಾದ ಸ್ವಾಮೀಜಿಯವರು ಒಂದು ಧರ್ಮದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮಾತಾಡುವುದು ಸರಿಯಲ್ಲ. ಇನ್ನೊಂದು ಧರ್ಮವನ್ನು ಅವಹೇಳನ ಮಾಡುವುದು ಹಾಗೂ ಪರ ಧರ್ಮದ ದೇವ ದೇವತೆಗಳನ್ನು ನಿಂದಿಸುವುದು ಇಸ್ಲಾಂ ವಿರೋಧಿಸುತ್ತದೆ . ಆದ್ದರಿಂದ ಹಿಂದೂ ಧರ್ಮದ ಅವಹೇಳನೆಯನ್ನು ನೈಜ ಮುಸಲ್ಮಾನ ಒಪ್ಪಲು ಸಾಧ್ಯವಿಲ್ಲ ಎಂದರು.

ಮುಸ್ಲಿಮರು ಒಂದು ವೇಳೆ ಇಂತಹ ಹೇಳಿಕೆಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದಲ್ಲಿ ಅಥವಾ ಇಂತಹ ಭಾಷಣಗಳಿಗೆ ಚಪ್ಪಾಳೆ ತಟ್ಟಿದರೆ ಅವರು ಪ್ರವಾದಿ ಅನುಯಾಯಿಯಾಗಲು ಸಾಧ್ಯ ವಿಲ್ಲ. ಇದು ಇಸ್ಲಾಮಿನ ನಿಯಮವಾಗಿದೆ ಎಂದು ರಹೀಂ ಉಚ್ಚಿಲ್ ಅಭಿಪ್ರಾಯ ಪಟ್ಟಿದ್ದಾರೆ. ಸ್ವಾಮೀಜಿ ಬಗ್ಗೆ ಅಪಾರ ಗೌರವ ಹೊಂದಿದ್ದು ಹಿಂದೂ ಸಮಾಜದಲ್ಲೂ ಸ್ವಾಮೀಜಿಗೆ ಗೌರವ ನೀಡುವ ಅಪಾರ ಅನುಯಾಯಿಗಳಿರುವಾಗ ಇಂತಹ ಮನಸಿಗೆ ನೋವು೦ಟಾಗುವ ಹೇಳಿಕೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಪ್ರವಾದಿ ನಿಂದನೆ ವಿಶ್ವದ ಯಾವುದೇ ಮೂಲೆಯಲ್ಲಿ ನಡೆದರೂ ಜಾಗತಿಕವಾಗಿ ಮುಸ್ಲಿಮರು ಒಗ್ಗಟ್ಟಾಗಿ ಖಂಡಿಸುತ್ತಾರೆ. ಆದರೆ ಹಿಂದೂ ಧರ್ಮದ ಬಗ್ಗೆ ಕೆಲವು ಬುದ್ಧಿಜೀವಿಗಳು ಅವಮಾನ ಮಾಡುವಾಗ ಸಮಾಜ ಒಗ್ಗಟ್ಟಾಗಿ ಖಂಡಿಸದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಪಮಾನಕ್ಕೀಡಾಗುತ್ತಿರುವುದು ವಿಷಾದದ ಸಂಗತಿ. ಸ್ವಾಮೀಜಿ ತನ್ನ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ