ಬೆಂಗಳೂರು: ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಅಮೆರಿಕಾದಲ್ಲಿ ವಿವಿಧ ಶೃಂಗಗಳಲ್ಲಿ ಭಾಗಿಯಾಗಬೇಕಿತ್ತು. ಆದರೆ ಭಾರತದ ವಿದೇಶಾಂಗ ಇಲಾಖೆ ಇದಕ್ಕೆ ಅನುಮತಿ ನಿರಾಕರಿಸಿದೆ. ಇದೀಗ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರರೂ ಆಗಿರುವ ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಪ್ಯಾರಿಸ್ ಪ್ರವಾಸ ಮಾಡಿದ್ದಾರೆ. ಅಲ್ಲಿಂದ ಅಮೆರಿಕಾಗೆ ತೆರಳುವ ಯೋಜನೆ ಅವರಲ್ಲಿತ್ತು. ಆದರೆ ಈಗ ಅಮೆರಿಕಾಗೆ ತೆರಳಲು ವಿದೇಶಾಂಗ ಇಲಾಖೆ ಎರಡು ವಾರಗಳ ಹಿಂದೆಯೇ ಅನುಮತಿ ನಿರಾಕರಿಸಿರುವುದು ಬೆಳಕಿಗೆ ಬಂದಿದೆ.
ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಈಗ ನಾನು ಯಾವುದೇ ಬಹಿರಂಗ ಹೇಳಿಕೆ ನೀಡುವುದಿಲ್ಲ. ಆದರೆ ಬೆಂಗಳೂರಿಗೆ ಬಂದ ಮೇಲೆ ಇದೆಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಖರ್ಗೆ ಪ್ರತಿಕ್ರಿಯೆ ಮೇಲೆ ಎಲ್ಲರ ಕುತೂಹಲವಿದೆ.
ಪ್ರಿಯಾಂಕ್ ಜೊತೆಗೆ ತೆರಳಿದ್ದ ಅಧಿಕಾರಿಗಳ ನಿಯೋಗಕ್ಕೆ ಕ್ಲಿಯರೆನ್ಸ್ ಸಿಕ್ಕಿದೆ. ಆದರೆ ಪ್ರಿಯಾಂಕ್ ಖರ್ಗೆಗೆ ಕ್ಲಿಯರೆನ್ಸ್ ನೀಡದೇ ಇರುವ ಕಾರಣ ಅವರೀಗ ಬೆಂಗಳೂರಿಗೆ ಮರಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಅನುಮತಿ ಯಾಕೆ ಕೊಟ್ಟಿಲ್ಲ ಎಂಬುದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.