ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾಗಿ ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರು ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ನಗರದ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ್ದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸಿ ಪಿಜಿಆರ್ ಸಿಂಧ್ಯಾ ಅವರೊಂದಿಗೆ ಕುಳಿತು ಮಾತನಾಡುತ್ತಿದ್ದ ಹೆಗ್ಡೆ ಅವರಿಗೆ ತಲೆ ಸುತ್ತು ಬಂದ ಹಾಗೆ ಆಯಿತು. ಕುಳಿತವರೇ ಅಲ್ಲಿಯೇ ಕುಸಿದು ಬಿದ್ದರು. ಪ್ರಾಥಮಿಕವಾಗಿ ಅವರಿಗೆ ನೀರು ನೀಡಿದರು, ಚೇತರಿಕೆ ಕಾಣಲಿಲ್ಲ.
ಕಾರ್ಯಕ್ರಮಕ್ಕೆ ಬಂದಿದ್ದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಸರ್ಕಾರಿ ವಾಹನದಲ್ಲಿ ತಕ್ಷಣವೇ ಸಂತೋಷ್ ಹೆಗ್ಡೆ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮಧುಮೇಹದಿಂದ ಸಂತೋಷ್ ಹೆಗ್ಡೆ ಅವರು ಬಳಲುತ್ತಿದ್ದು, ಏಕಾಏಕಿ ರಕ್ತದ ಸಕ್ಕರೆ ಅಂಶದಲ್ಲಿ ಕುಸಿತ ಉಂಟಾಗಿದ್ದರಿಂದ ಈ ರೀತಿ ಆಗಿರಬಹುದು. ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.