ವಕ್ಫ್ ತಂಟೆಗೆ ಬಂದರೆ ಮುಸ್ಲಿಂ ಸಮುದಾಯ ನಿಮ್ಮನ್ನು ಮುಗಿಸುತ್ತದೆ: ಬಿಜೆಪಿಗೆ ಧಮ್ಕಿ

Krishnaveni K

ಮಂಗಳವಾರ, 17 ಸೆಪ್ಟಂಬರ್ 2024 (11:37 IST)
Photo Credit: Instagram
ಕೊಪ್ಪಳ: ವಕ್ಫ್ ತಂಟೆಗೆ ಬಂದರೆ ಮುಸ್ಲಿಂ ಸಮುದಾಯ ನಿಮ್ಮ ಕತೆ ಮುಗಿಸುತ್ತದೆ ಎಂದು ಬಿಜೆಪಿ ಮತ್ತು ಆರ್ ಎಸ್ಎಸ್ ಗೆ ಎಸ್ ಡಿಪಿಐ ಸಂಘಟನೆ ಕಾರ್ಯಕರ್ತ ಇಮ್ರಾನ್ ಎಚ್ಚರಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ನಡೆದ ವಕ್ಫ್ ಮಂಡಳಿಗೆ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಇಮ್ರಾನ್ ಪ್ರಚೋದನಕಾರೀ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ವಕ್ಫ್ ತಂಟೆಗೆ ಬಂದರೆ ನಿಮ್ಮ ಮತ್ತು ನೀವು ಯಾವ ಸಂತತಿಯಿಂದ ಬಂದಿದ್ದೀರೋ ಅವರನ್ನು ಮುಸ್ಲಿಂ ಸಮುದಾಯ ಮುಗಿಸುತ್ತದೆ ಎಂದು ಪ್ರಚೋದನಕಾರೀ ಹೇಳಿಕೆ ನೀಡಿದ್ದಾರೆ.

ನೀವಲ್ಲ ನಿಮ್ಮ ಗುರುವಾದಂತಹ ನಾಗ್ಪುರದಲ್ಲಿರುವ ಸಾವರ್ಕರ್ ನ ಸಂತತಿಗಳು ಬಂದರೂ ಸಹ ಈ ಮುಸಲ್ಮಾನರ ವಕ್ಫ್ ಆಸ್ತಿಯನ್ನು ಮುಟ್ಟಸಲು ಸಾಧ್ಯವಿಲ್ಲ. ಒಂದು ವೇಳೆ ಮುಸಲ್ಮಾನರು ಈಗ ಸಣ್ಣ ಸಣ್ಣ ಪ್ರತಿಭಟನೆ ಮಾಡುತ್ತಿರಬಹುದು. ಇದೇ ದೇಶದಲ್ಲಿ ಮೊದಲು ಎನ್ಆರ್ ಸಿ ಜಾರಿಗೆ ತರಲು ಪ್ರಯತ್ನ ಮಾಡಲಾಗಿತ್ತು. ಆಗ ನಮ್ಮ ಹೆಣ್ಣು ಮಕ್ಕಳು ನಿಮ್ಮನ್ನು ಒದ್ದು ಆ ಬಿಲ್ ನ್ನು ರಿಜೆಕ್ಟ್ ಮಾಡುವ ಮೂಲಕ ಹುಟ್ಟಿಲ್ಲ ಅನಿಸಿದ್ದರು. ಈಗ ಗಂಡು ಮಕ್ಕಳೂ ಹೋರಾಟಕ್ಕಿಳಿದರೆ ನೀವು ಯಾವ ರಾಷ್ಟ್ರದಿಂದ ಬಂದಿದ್ದೀರಿ, ಯಾವ ಸಂತತಿಗಳು ನೀವು ಆ ಸಂತತಿಗಳನ್ನೂ ಕೂಡಾ ಈ ಮುಸಲ್ಮಾನ ಸಮುದಾಯ ಮುಗಿಸಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ಸರ್ಕಾರ ಮತ್ತು ಆರ್ ಎಸ್ಎಸ್ ಗೆ ನೀಡಲು ಇಚ್ಛಿಸುತ್ತೇನೆ’ ಎಂದಿದ್ದಾರೆ.

ಜೊತೆಗೆ ಮಾಧ್ಯಮಗಳೂ ಬಿಜೆಪಿ ಮತ್ತು ಆರ್ ಎಸ್ಎಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿರುವ ಇಮ್ರಾನ್, ಮುಂದೊಂದು ದಿನ ನಮ್ಮ ಮಕ್ಕಳಿಗೂ ಜರ್ನಲಿಸಂ ಕಲಿಸಿ ಆ ಮೂಲಕವೂ ಉತ್ತರ ಕೊಡಲಿದ್ದೇವೆ ಎಂಬ ಸಂದೇಶವನ್ನು ನೀಡುತ್ತಿದ್ದೇವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ