ನಟ ಕಮಲಹಾಸನ್, ಇವತ್ತು ಚಾಲ್ತಿಯಲ್ಲಿ ಇಲ್ಲದ ನಾಣ್ಯ: ಶೋಭಾ ಕರಂದ್ಲಾಜೆ

Krishnaveni K

ಶುಕ್ರವಾರ, 30 ಮೇ 2025 (18:02 IST)
ಬೆಂಗಳೂರು: ನಟ ಕಮಲಹಾಸನ್ ಅವರು ಸಿನಿಮಾ ಪ್ರಚಾರಕ್ಕಾಗಿ ಕನ್ನಡಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಇದು ಖಂಡನೀಯ ಎಂದು ಕೇಂದ್ರ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದ್ದಾರೆ.

ನಗರದ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಇಂದು ಪತ್ರಕರ್ತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಕನ್ನಡ, ತಮಿಳು, ತೆಲುಗು, ಮಲಯಾಳ ಸೇರಿ ನಮ್ಮ ದೇಶದ ಯಾವುದೇ ಭಾಷೆ ಇರಬಹುದು; ನಾವೆಲ್ಲರೂ ಭಾರತೀಯರು. ನಾವೆಲ್ಲರೂ ಒಟ್ಟಾಗಿ ಬದುಕಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ- ತಮಿಳುನಾಡಿನ ನಡುವೆ ನೀರು ಮತ್ತು ಭಾಷೆಯ ವಿಚಾರದಲ್ಲಿ ಬೆಂಕಿ ಹಚ್ಚಲು ತುಂಬ ಜನರು ಪ್ರಯತ್ನಿಸುತ್ತಾರೆ. ಆದರೆ, ನಾವು ಒಟ್ಟಾಗಿ ಬದುಕಬೇಕಾದ, ಒಟ್ಟಾಗಿ ಇರಬೇಕಾದ ಅಗತ್ಯ ಇದೆ ಎಂದು ನುಡಿದರು. ಕಮಲಹಾಸನ್ ಅವರು ಇವತ್ತು ಚಾಲ್ತಿಯಲ್ಲಿ ಇಲ್ಲದ ನಾಣ್ಯ; ಅವರಿಗೆ ಬೆಲೆ ಕೊಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.

ದಕ್ಷಿಣ ಭಾರತದ ತಮಿಳು, ಕನ್ನಡ, ತುಳು ಮೊದಲಾದ ಭಾಷೆಗಳು ಒಟ್ಟಿಗೇ ಬೆಳೆದಿವೆ ಎಂದು ಭಾಷಾ ತಜ್ಞರು ಹೇಳಿದ್ದಾರೆ. ಇದಕ್ಕೆ ಆ ಭಾಷೆ ಮೊದಲು, ಈ ಭಾಷೆ ನಂತರ ಎಂಬುದಿಲ್ಲ; ಇವೆಲ್ಲವೂ ಅವಳಿ ಮಕ್ಕಳಂತೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
 
ಕಾನೂನು- ಸುವ್ಯವಸ್ಥೆ ಎಲ್ಲಿದೆ?
ದಕ್ಷಿಣ ಕನ್ನಡದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟ ಕುರಿತು ಪತ್ರಕರ್ತರು ಗಮನ ಸೆಳೆದರು. ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ; ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಎಲ್ಲಿ ಅತ್ಯಾಚಾರ ನಡೆಯುತ್ತಿದೆ; ಎಲ್ಲಿ ಯಾರ ಕೊಲೆ ನಡೆಯುತ್ತಿದೆ ಎಂದು ಗೊತ್ತಾಗದ ಸ್ಥಿತಿ ಇದೆ. ನಮ್ಮ ಯಾರ ಪ್ರಾಣಕ್ಕೂ ರಕ್ಷಣೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
 
ಸರಕಾರ ಪ್ರಾಣದ ಗ್ಯಾರಂಟಿ ನೀಡುತ್ತಿಲ್ಲ
ಮನೆಯಿಂದ ಹೊರಕ್ಕೆ ಹೋದವರು ವಾಪಸ್ ಬರುವ ಗ್ಯಾರಂಟಿ ಇಲ್ಲ. ಬಾಕಿ ಎಲ್ಲ ಗ್ಯಾರಂಟಿ ಕೊಡುತ್ತಾರೆ. ಆದರೆ, ಕಾಂಗ್ರೆಸ್ಸಿನವರು ಪ್ರಾಣದ ಗ್ಯಾರಂಟಿ ಕೊಡುತ್ತಿಲ್ಲ ಎಂದು ಟೀಕಿಸಿದರು. ಗೃಹ ಸಚಿವರೇ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರೇ ಮಾಫಿಯದ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇಂಥವರನ್ನು ಇಟ್ಟುಕೊಂಡು ಕರ್ನಾಟಕದ ಕಾನೂನು- ಸುವ್ಯವಸ್ಥೆ ಕುರಿತು ಮಾತನಾಡುವುದರಿಂದ ಪ್ರಯೋಜನ ಇಲ್ಲ ಎಂದು ಕು. ಶೋಭಾ ಕರಂದ್ಲಾಜೆ ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
 
2013ರಲ್ಲಿ ಸಿದ್ದರಾಮಯ್ಯನವರು ಪಿಎಫ್‍ಐ ಕೇಸನ್ನು ವಾಪಸ್ ಪಡೆದರು. 800 ರೌಡಿಗಳನ್ನು ರಸ್ತೆಗೆ ಬಿಟ್ಟರು. ಆ ರೌಡಿಗಳು ನಮ್ಮ ಹುಡುಗರನ್ನು ಕೊಂದು ಹಾಕಿದರು. ಇವತ್ತು ಮತ್ತೆ ಹುಬ್ಬಳ್ಳಿ ಪೊಲೀಸ್ ಠಾಣೆ ಸುಟ್ಟವರು ಸೇರಿ 46 ಕೇಸ್ ವಾಪಸ್ ಪಡೆಯಲು ಹೊರಟಿದ್ದರು. ಇದರಿಂದ 1500 ಕ್ರಿಮಿನಲ್ ಹಿನ್ನೆಲೆ ಉಳ್ಳವರು ಬಂಧವಿಮುಕ್ತರಾಗುತ್ತಿದ್ದರು. ಇದನ್ನು ತಡೆದ ಹೈಕೋರ್ಟಿಗೆ ಧವ್ಯವಾದಗಳು ಎಂದು ತಿಳಿಸಿದರು.

ಸಚಿವ ದಿನೇಶ್ ಗುಂಡೂರಾವ್ ಅವರು, ದಕ್ಷಿಣ ಕನ್ನಡದಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಅವರು ಒಂದು ಜನಾಂಗಕ್ಕೆ ರಕ್ಷಣೆ ಕೊಡುವ ಉಸ್ತುವಾರಿ ಸಚಿವರೇ? ನಮ್ಮ ಪ್ರಾಣಕ್ಕೆ ಬೆಲೆ ಇಲ್ಲವೇ ಎಂದು ಕೇಳಿದರು. ಕರ್ನಾಟಕವನ್ನು ನೀವೇನು ಮಾಡಬೇಕೆಂದಿದ್ದೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಇದನ್ನು ಗೂಂಡಾ ರಾಜ್ಯ ಮಾಡಲು ಹೊರಟಿದ್ದೀರಿ. ಒಂದು ಕಾಲಕ್ಕೆ ಬಿಹಾರ ಗೂಂಡಾ ರಾಜ್ಯ ಎನ್ನುತ್ತಿದ್ದೆವು. ದೆಹಲಿಯಲ್ಲಿ ಕುಳಿತಾಗ ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಕೇಳುತ್ತಾರೆ. ನಮ್ಮಲ್ಲಿ ಉತ್ತರ ಇಲ್ಲ; ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರರ ನೇತೃತ್ವದಲ್ಲಿ ಅಂಥ ರಾಜ್ಯವನ್ನಾಗಿ ಇವತ್ತು ಕರ್ನಾಟಕವನ್ನು ಮಾಡಿದ್ದಾರೆ ಎಂದು ಟೀಕಿಸಿದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ