ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಶಾಂತಿ ಕೆಡಲು ಕಾಂಗ್ರೆಸ್ ಸರಕಾರ, ಅವರ ಇಬ್ಬಗೆಯ ನೀತಿ ಹಾಗೂ ತುಷ್ಟೀಕರಣದ ನೀತಿ ಕಾರಣ ಎಂದು ಅವರು ಆಕ್ಷೇಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸಲ್ಮಾನರಿಗೆ ರಕ್ಷಣೆ ಇಲ್ಲ; ಅವರು ಮಾತನಾಡುವ ಹಾಗೆ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದರು ಎಂದರಲ್ಲದೆ, ದಿನೇಶ್ ಗುಂಡೂರಾವ್ ಅವರು ಏನು ಮಾತನಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು. ಯಾರು ರಕ್ಷಣೆ ಕೊಡಬೇಕು? ಯಾಕೆ ರಕ್ಷಣೆ ಸಿಗುತ್ತಿಲ್ಲ ಎಂದು ಕೇಳಿದರು. ದಿನೇಶ್ ಗುಂಡೂರಾವ್ ಅವರ ನೀತಿ ಕೇವಲ ತುಷ್ಟೀಕರಣ ಮತ್ತು ಮತಬ್ಯಾಂಕನ್ನು ತೋರಿಸುತ್ತದೆ ಎಂದು ನುಡಿದರು.
ಮತಬ್ಯಾಂಕ್ ಬಿಟ್ಟು ಬೇರೇನೂ ಕಾಂಗ್ರೆಸ್ಸಿಗರಿಗೆ ಕಾಣುತ್ತಿಲ್ಲ; ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯೇ ಉದಾಹರಣೆ ಎಂದು ದೂರಿದರು. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಸರಕಾರಿ ಯೋಜನೆ ಬೇಕು. ಆದರೆ ನಾವು ಬೇಡ ಎಂದಿದ್ದಾರೆ; ಇದರ ಅರ್ಥ ಏನು ಎಂದು ಕೇಳಿದರು. ಯಾರು ನಿಮಗೆ ಮತ ಹಾಕಿದ್ದಾರೋ ಅವರಿಗೆ ಮಾತ್ರ ಗ್ಯಾರಂಟಿ ಕೊಡುವವರೇ? ಅವರು ಮಾತ್ರ ಸರಕಾರಿ ಯೋಜನೆಯ ಸೌಲಭ್ಯ ಪಡೆಯಬೇಕೇ ಎಂದು ಕೇಳಿದರು.